“ದಾರಿತಪ್ಪಿದ ಮಗ’ನ ಹೆಸರು ಬದಲಾಗುತ್ತೆ!
ಚಿತ್ರದ ಕಥೆಗೂ ಶೀರ್ಷಿಕೆಗೂ ಹೊಂದಿಕೆಯಾಗದ ಕಾರಣ ತೀರ್ಮಾನ
Team Udayavani, Sep 26, 2019, 3:02 AM IST
ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆರಂಭದಲ್ಲಿ ಇದ್ದದ್ದು, ಕ್ಲೈಮ್ಯಾಕ್ಸ್ ವೇಳೆಗೆ ಇರೋದಿಲ್ಲ. ಅದು ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರು ಹೀಗೆ ಒಂದಲ್ಲ ಒಂದು ಬದಲಾವಣೆ ಸಹಜ. ಆದರೆ, ಅದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಆ ಸಾಲಿಗೆ ಈಗ ನಟ ರಾಮ್ಕುಮಾರ್ ಅವರ ಪುತ್ರ ಧೀರನ್ ಅಭಿನಯದ “ದಾರಿ ತಪ್ಪಿದ ಮಗ’ ಚಿತ್ರವೂ ಸೇರಿದೆ. ಹಾಗಂತ, ಈ ಚಿತ್ರದಲ್ಲಿ ಆಗಿರುವ ಬದಲಾವಣೆ ಏನೆಂಬ ಕುತೂಹಲ ಇದ್ದೇ ಇರುತ್ತೆ.
ವಿಷಯವಿಷ್ಟೇ, ಚಿತ್ರಕ್ಕೆ “ದಾರಿ ತಪ್ಪಿದ ಮಗ’ ಎಂಬ ಶೀರ್ಷಿಕೆ ಸರಿಹೊಂದುತ್ತಿಲ್ಲ. ಚಿತ್ರದ ಕಥೆಗೂ ಮತ್ತು ಶೀರ್ಷಿಕೆಗೂ ಹೊಂದಿಕೆ ಆಗಲ್ಲ ಎಂಬ ಕಾರಣದಿಂದ ಶೀರ್ಷಿಕೆ ಬದಲಿಸುವ ನಿರ್ಧಾರಕ್ಕೆ ಚಿತ್ರತಂಡ ಬಂದಿದೆಯಂತೆ. ಆದರೆ, ಆ ಶೀರ್ಷಿಕೆ ಬದಲು ಯಾವ ಟೈಟಲ್ ಇಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂಬುದು ಸುದ್ದಿ. ಸದ್ಯಕ್ಕೆ ಚಿತ್ರತಂಡದಲ್ಲಿ ಒಂದೆರೆಡು ಶೀರ್ಷಿಕೆಗಳಿವೆಯಾದರೂ, ಆ ಪೈಕಿ ಯಾವುದು ಅಂತಿಮಗೊಳ್ಳಲಿದೆ ಎಂಬುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ.
ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಬಿಡುಗಡೆಯ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಚಿತ್ರದಲ್ಲಿ ಧೀರನ್ ರಾಮ್ಕುಮಾರ್ ಅವರಿಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿರುವ ಧೀರನ್, ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಅನಿಲ್ಕುಮಾರ್ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದಾರೆ.