ಚಿರು ಈಗ ಶಿವಾರ್ಜುನ
ನಿರ್ಮಾಪಕರ ಹೆಸರೇ ಟೈಟಲ್ ಆಯ್ತು!
Team Udayavani, Aug 12, 2019, 3:01 AM IST
ನಟ ಚಿರಂಜೀವಿ ಸರ್ಜಾ ಅವರ “ಖಾಕಿ’ ಚಿತ್ರೀಕರಣ ಮುಗಿದಿದೆ. ಈಗ ಅವರ ಮತ್ತೂಂದು ಹೊಸ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಈ ಹಿಂದೆ “ಧೈರ್ಯಂ’ ಸಿನಿಮಾ ನಿರ್ದೇಶಿಸಿದ ಶಿವತೇಜಸ್ ನಿರ್ದೇಶನದ ಚಿತ್ರದಲ್ಲಿ ಚಿರು ಬಿಝಿಯಾಗಿದ್ದಾರೆ. ಈ ಚಿತ್ರಕ್ಕೆ ಟೈಟಲ್ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್ ಆಗಿದ್ದು, “ಶಿವಾರ್ಜುನ’ ಎಂದು ಹೆಸರಿಡಲಾಗಿದೆ.
ಚಿತ್ರವನ್ನು ಎಂ.ಬಿ.ಮಂಜುಳ ಶಿವಾರ್ಜುನ್ ನಿರ್ಮಿಸುತ್ತಿದ್ದು, ಈಗ ನಿರ್ಮಾಪಕರ ಹೆಸರೇ ಸಿನಿಮಾ ಟೈಟಲ್ ಆಗಿದೆ. ಅಂದಹಾಗೆ, ಇದೊಂದು ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಅಮೃತಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಈಗಾಗಲೇ ಚಿರು ನಟನೆಯ “ಸಿಂಗ’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅವರ “ಖಾಕಿ’ ಚಿತ್ರ ಸಿದ್ಧವಾಗಿದ್ದು, ಈ ಚಿತ್ರದ ಮೇಲೆ ಚಿರು ನಿರೀಕ್ಷೆ ಇಟ್ಟಿದ್ದಾರೆ. ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಿತ್ವಿಕ್ ಸಂಗೀತ ನೀಡಿದ್ದಾರೆ.
ಬಾಲಾ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ನವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಅವರು ನಿರ್ಮಿಸುತ್ತಿದ್ದಾರೆ.