ಸೀತಾರಾಮ ಕಲ್ಯಾಣಕ್ಕೆ ಸಿಎಂ ಸಾಕ್ಷಿ
Team Udayavani, Aug 2, 2018, 11:50 AM IST
ನಟ ನಿಖಿಲ್ ಕುಮಾರ್ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಮನಗರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ.
ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರವಿದು. ಈ ಚಿತ್ರಕ್ಕೆ ಹರ್ಷ ನಿರ್ದೇಶನ ಮಾಡಿದ್ದಾರೆ. ರಚಿತಾರಾಮ್ ನಾಯಕಿಯಾಗಿ ನಟಿಸಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವುದು ವಿಶೇಷ. ಸದ್ಯಕ್ಕೆ ಟೀಸರ್ ಬಿಡುಗಡೆಯಾಗಿದ್ದು, ಇಷ್ಟರಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಕುಮಾರಸ್ವಾಮಿ ಅವರ ಬ್ಯಾನರ್ನಲ್ಲೇ “ಸೀತಾರಾಮ ಕಲ್ಯಾಣ’ ಚಿತ್ರ ನಿರ್ಮಾಣಗೊಂಡಿದೆ. ಟೀಸರ್ ಬಿಡುಗಡೆ ವೇಳೆ ಶಾಸಕ ಮುನಿರತ್ನ, ಲಹರಿ ಆಡಿಯೋ ಸಂಸ್ಥೆಯ ವೇಲು, ನಿರ್ದೇಶಕ ನಾಗಣ್ಣ, ಭಗವಾನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.