“ಆರೋಗ್ಯ ಸೇತು” ಆ್ಯಪ್ ಮೂಲಕ ಕೋವಿಡ್ ಜಾಗೃತಿಗೆ ಮುಂದಾದ ಪವರ್ ಸ್ಟಾರ್
ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ.
Team Udayavani, Apr 10, 2020, 2:43 PM IST
ಬೆಂಗಳೂರು: ದೇಶಾದ್ಯಂತ ಹರಡುತ್ತಿರುವ ಕೋವಿಡ್ ಮಹಾಮಾರಿ ವಿರುದ್ದ ಜನಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ‘ಆರೋಗ್ಯ ಸೇತು’ ಆ್ಯಪ್ ಬಿಡುಗಡೆ ಮಾಡಿದೆ. ಕೋವಿಡ್ ಸೋಂಕಿತ ವ್ಯಕ್ತಿಯನ್ನು ಟ್ರ್ಯಾಕ್ ಮಾಡಿ ಆತ ಅಥವಾ ಆಕೆಯ ಮೇಲೆ ನಿಗಾ ಇಡುವ ಕೆಲಸವನ್ನು ಈ ‘ಆರೋಗ್ಯ ಸೇತು’ ಆ್ಯಪ್ ಮಾಡುತ್ತದೆ. ಇದರಲ್ಲಿ ಜಿಪಿಎಸ್ ಇದ್ದು ಆ ಮೂಲಕ ಸೋಂಕಿತರ ಚಲನ ವಲನದ ಕುರಿತು ಮಾಹಿತಿ ಒದಗುತ್ತದೆ.
ಇದೀಗ ‘ಆರೋಗ್ಯ ಸೇತು’ ಆ್ಯಪ್ ಹಾಗೂ ಕೋವಿಡ್ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿದ್ದ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಜನರಲ್ಲಿ ಕೋವಿಡ್ ವೈರಸ್ ಸೋಂಕಿನ ಸಂಬಂಧ ಕಾಳಜಿ ಮೂಡಿಸುವಂತೆಯೂ ‘ಆರೋಗ್ಯ ಸೇತು’ ಆ್ಯಪ್ ಬಗೆಗೆ ಅರಿವು ಮೂಡಿಸುವಂತೆಯೂ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿರುವ ಪುನೀತ್ ರಾಜಕುಮಾರ್, ‘ಆರೋಗ್ಯ ಸೇತು’ ಆ್ಯಪ್ ಬಳಸುವಂತೆ ಮತ್ತು ಕೋವಿಡ್ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.