ಕ್ರೇಜಿ ಟೈಮ್ : ಮನೆಯಲ್ಲೇ ಆಟ-ಪಾಠ
Team Udayavani, Apr 22, 2020, 11:28 AM IST
ಲಾಕ್ಡೌನ್ ಹಿನ್ನೆಲೆಯಲ್ಲಿ ರವಿಚಂದ್ರನ್ ಅವರ ಫ್ಯಾಮಿಲಿ ಇದೀಗ ಮನೆಯಲ್ಲೇ ಕಾಲ ಕಳೆಯುತ್ತಿದೆ. ಆದರಲ್ಲೂ ಕೇರಂ ಸೇರಿದಂತೆ ಇತ್ಯಾದಿ ಆಟಗಳ ಜೊತೆಗೆ ಸಿನಿಮಾ ಹಾಗು ಇತರೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಮಯ ಕಳೆಯುತ್ತಿದೆ. ಇನ್ನು, ಅವರ ಎರಡನೇ ಪುತ್ರ ವಿಕ್ರಮ್ ಅವರು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲೇ ಇರಬೇಕು. ಸದ್ಯಕ್ಕೆ ಕ್ವಾರಂಟೈನ್ನಲ್ಲಿರುವ ಪ್ರತಿಯೊಬ್ಬರೂ ಹುಷಾರಾಗಿರಬೇಕು.
ಕೋವಿಡ್ 19 ವಿರುದ್ಧ ಎಲ್ಲರೂ ಹೋರಾಡಿ, ಅದನ್ನು ಹೋಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯಕ್ಕೆ ಕೋವಿಡ್ 19 ಎಲ್ಲರನ್ನೂ ಒಂದೆಡೆ ಇರುವಂತೆ ಮಾಡಿದೆ. ಅದರಲ್ಲೂ ನನ್ನ ತಂದೆ, ರವಿ ಬೋಪಣ್ಣ ಚಿತ್ರದಲ್ಲಿ ಬಿಝಿ ಇದ್ದರು. ಸಹೋದರು ಮನು ಅವರು ಸಹ ಮುಗಿಲ್ ಪೇಟೆ ಚಿತ್ರದಲ್ಲಿ ತೊಡಗಿದ್ದರು. ಇನ್ನು ನಾನು ತ್ರಿವಿಕ್ರಮ ಸಿನಿಮಾದಲ್ಲಿ ನಿರತನಾಗಿದ್ದೆ. ಹೀಗಾಗಿ ಮೂವರು ಪ್ರತಿ ನಿತ್ಯ ಒಟ್ಟಿಗೆ ಸೇರಲು ಆಗುತ್ತಿರಲಿಲ್ಲ. ಈಗ ಲಾಕ್ಡೌನ್ ಇರುವುದರಿಂದ ಅಪ್ಪ, ಸಹೋದರ ಮತ್ತು ನಾನು ಮೂವರು ಒಟ್ಟಿಗಿದ್ದೇವೆ. ಇದೊಂದು ಫ್ಯಾಮಿಲಿ ಟೈಮ್. ಮನೆಯಲ್ಲಿದ್ದು ಎಲ್ಲರೂ ಈಗ ಚಿಕ್ಕಂದಿನಲ್ಲಿ ಆಡಿದ್ದ ಕೇರಂ ಆಟ ಆಡುತ್ತಿದ್ದೇವೆ. ಅಪ್ಪ, ಅಮ್ಮ, ಮನು, ನಾನು ಮತ್ತು ನನ್ನೊಂದಿಗೆ ಅಕ್ಕ, ಭಾವ ಎಲ್ಲರೂ ಮನೇಲಿ ಸೇರಿಕೊಂಡು ಸಮಯ ಕಳೆಯುತ್ತಿದ್ದೇವೆ.
ಅಪ್ಪನ ಜೊತೆ ಹರಟುತ್ತಿದ್ದೇವೆ. ಅಮ್ಮನ ಕೈ ರುಚಿ ಸವಿಯುತ್ತಿದ್ದೇವೆ. ಇನ್ನು, ಕೆಲವು ದಿನಗಳ ಹಿಂದೆ ತ್ರಿವಿಕ್ರಮ ಚಿತ್ರದ ಚಿತ್ರೀಕರಣ ಬ್ಯಾಂಕಾಕ್ನಲ್ಲಿ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿ ಬರುವ ಕೊನೆಯ ಎರಡು ದಿನಗಳಲ್ಲಿ ಕೋವಿಡ್ 19 ಹರಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ, ಎಲ್ಲರೂ ಸಾಂಗ್ ಮುಗಿಸಿಕೊಂಡು ಮರಳಿಬಿಟ್ಟೆವು. ಸದ್ಯ ಯಾರಿಗೂ ಯಾವ ತೊಂದರೆಯೂ ಆಗಿಲ್ಲ. ನಿರ್ದೇಶಕ ಸಹನಾಮೂರ್ತಿ ಅವರು ತ್ರಿವಿಕ್ರಮ ಸಿನಿಮಾವನ್ನು ಚೆನ್ನಾಗಿ ಕಟ್ಟಿಕೊಡುತ್ತಿದ್ದಾರೆ. ನಮಗೆ ಆ ಸಿನಿಮಾ ಮೇಲೆ ಭರವಸೆ ಇದೆ ಎನ್ನುವ ತ್ರಿವಿಕ್ರಮ, ಸದ್ಯಕ್ಕೆ ಕೋವಿಡ್ 19 ವೈರಸ್ ವಿರುದ್ಧ ಹೋರಾಡೋಕೆ ಪ್ರತಿಯೊಬ್ಬರೂ ರೆಡಿಯಾಗಬೇಕು. ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಇದಕ್ಕೆ ಮದ್ದು ಎನ್ನುವ ಮೂಲಕ ತಮ್ಮ ಅಭಿಮಾನಿಗಳಿಗೆ, ತಂದೆ ರವಿಚಂದ್ರನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.