“ಕುರುಕ್ಷೇತ್ರ’ದಲ್ಲಿ ಭೀಮನಾಗಿ ದಾನಿಶ್ ಅಖ್ತರ್ ಸೈಫಿ
Team Udayavani, Jul 25, 2017, 3:46 PM IST
“ಕುರುಕ್ಷೇತ್ರ’ ಚಿತ್ರದದಲ್ಲಿ ದರ್ಶನ್ ಅವರು ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಅದು ಅವರ 50ನೇ ಚಿತ್ರವಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ದರ್ಶನ್ ಅವರು ದುಯೋರ್ಧನನಾಗಿ ಕಾಣಿಸಿಕೊಂಡರೆ, ಚಿತ್ರದಲ್ಲಿ ಭೀಮನಾಗಿ ಯಾರು ನಟಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಪಾತ್ರಕ್ಕೆ ಕುಸ್ತಿಪಟು ಮತ್ತು ನಟ ದಾನಿಶ್ ಅಖ್ತರ್ ಸೈಫಿ ಆಯ್ಕೆಯಾಗಿದ್ದಾರೆ.
ಹೌದು, ದಾನಿಶ್ ಅಖ್ತರ್ ಸೈಫಿ ಅವರು ಚಿತ್ರದಲ್ಲಿ ಭೀಮನಾಗಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಧೃತರಾಷ್ಟ್ರನ ಪಾತ್ರದಲ್ಲಿ ಹಿರಿಯ ನಟ ಶ್ರೀನಾಥ್, ಕೃಷ್ಣನಾಗಿ ರವಿಚಂದ್ರನ್, ಭೀಷ್ಮರಾಗಿ ಅಂಬರೀಶ್, ದ್ರೋಣಾಚಾರ್ಯರಾಗಿ ಶ್ರೀನಿವಾಸಮೂರ್ತಿ, ಕುಂತಿದೇವಿಯಾಗಿ ಲಕ್ಷ್ಮೀ, ದ್ರೌಪದಿಯಾಗಿ ಸ್ನೇಹ, ಅಭಿಮನ್ಯು ಆಗಿ ನಿಖೀಲ್ ಕುಮಾರ್, ಶಕುನಿಯಾಗಿ ಸಾಯಿಕುಮಾರ್ ನಟಿಸುತ್ತಿದ್ದಾರೆ. ಈಗ ಅವರೆಲ್ಲರ ಜೊತೆಗೆ ದಾನಿಶ್ ಅಖ್ತರ್ ಸೈಫಿ ಸೇರಿಕೊಂಡಿದ್ದಾರೆ.
ಮುನಿರತ್ನ ನಿರ್ಮಾಣದ ಈ ಚಿತ್ರಕ್ಕೆ ಜುಲೈ 30ಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ. ಪೀಣ್ಯ ಬಳಿ ಇರುವ ಪ್ರಭಾಕರ್ ಕೋರೆ ಕನ್ವೆನ್ಷನ್ ಹಾಲ್ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಿತ್ರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.