ದೀಪಕ್ ಗಂಗಾಧರ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ
Team Udayavani, Jan 12, 2021, 1:30 PM IST
ನಟ ಮದರಂಗಿ ಕೃಷ್ಣ ಸದ್ಯ “ಶ್ರೀಕೃಷ್ಣ ಆ್ಯಟ್ ಜಿಮೇಲ್ ಡಾಟ್ ಕಾಂ’, “ಶುಗರ್ ಫ್ಯಾಕ್ಟರಿ’, “ಮಿಸ್ಟರ್ ಬ್ಯಾಚುಲರ್’, “ಲವ್
ಮಾಕ್ಟೇಲ್-2′ ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ಕೃಷ್ಣ ಅಭಿನಯದ ಮತ್ತೂಂದು
ಹೊಸ ಚಿತ್ರ ಅನೌನ್ಸ್ ಆಗಿದೆ.
ಹೌದು, ಕೃಷ್ಣ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜೊತೆಗೆ ಆ್ಯಕ್ಷನ್ ಕಥಾ ಹಂದರ ಹೊಂದಿರುವ ಹೊಸ ಚಿತ್ರದಲ್ಲಿ ಕೃಷ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಟೈಟಲ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಕನ್ನಡದಲ್ಲಿ “ಯಜಮಾನ’, “ಅಮರ್’, “ಕಾಳಿದಾಸ ಕನ್ನಡ ಮೇಷ್ಟ್ರು’, “ನನ್ನ ಪ್ರಕಾರ’, ತೆಲುಗಿನ “ಸೈರಾ ನರಸಿಂಹ ರೆಡ್ಡಿ’ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿರುವ ವಿತರಕ ದೀಪಕ್ ಗಂಗಾಧರ್ ಈ ಚಿತ್ರಕ್ಕೆ
ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ತಮ್ಮ ಚೊಚ್ಚಲ ನಿರ್ದೇಶನ ಈ ಚಿತ್ರದ ಬಗ್ಗೆ ಮಾತನಾಡುವ ದೀಪಕ್ ಗಂಗಾಧರ್, “ಆರಂಭದಲ್ಲಿ ಸಹಾಯಕ
ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು ನಾನು. ಇಲ್ಲಿಯವರೆಗೆ ಹಲವು ಸಿನಿಮಾಗಳಿಗೆ ಸ್ಕ್ರಿಪ್ಟ್, ನಿರ್ದೇಶನ ವಿಭಾಗದಲ್ಲಿ ಕೆಲಸ
ಮಾಡಿದ್ದೇನೆ. ಆದ್ರೆ ಆನಂತರ ವಿತರಣೆಯಲ್ಲಿ ತೊಡಗಿಸಿಕೊಂಡೆ. ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದೇನೆ.
ಇದನ್ನೂ ಓದಿ:ಬಡ್ಡೀಸ್ಗೆ ಸಿರಿ ನಾಯಕಿ : ಶಿಕಾರಿ ಹುಡುಗಿಯ ಸಿನಿಶಿಕಾರಿ
ಒಳ್ಳೆಯ ಕಥೆಯನ್ನ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬ ಬಹುವರ್ಷಗಳ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಸುಮಾರು ನಾಲ್ಕು ವರ್ಷದ ಹಿಂದೆಯೇ ರೆಡಿಯಾಗಿದ್ದ ಈ ಕಥೆಗೆ, ಲಾಕ್ಲೌನ್ ವೇಳೆ ಚಿತ್ರಕಥೆ ಸಿದ್ದಪಡಿಸಿಕೊಂಡೆ. ಕಥೆ ಕೇಳಿದ ಕೃಷ್ಣ ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ಪಕ್ಕಾ ರೊಮ್ಯಾಂಟಿಕ್,
ಕಾಮಿಡಿಯ ಜೊತೆಗೆ ಆ್ಯಕ್ಷನ್ ಇರುವಂಥ ಸಿನಿಮಾ. ಕಂಪ್ಲೀಟ್ ಎಂಟರ್ಟೈನ್ಮೆಂಟ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ.
ಇನ್ನು ಈ ಚಿತ್ರದಲ್ಲಿ ಕೃಷ್ಣ ಅವರಿಗೆ ನಾಯಕಿಯರಾಗಿ ರಚಿತಾ ರಾಮ್ ಸೇರಿದಂತೆ ಹಲವು ನಟಿಯರ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಮಾತನಾಡುವ ದೀಪಕ್, “ಈಗಾಗಲೇ ಟ್ರೆಂಡಿಂಗ್ ನಲ್ಲಿರುವ ಕನ್ನಡದ ಕೆಲ ನಾಯಕಿಯರನ್ನು ಅಪ್ರೋಚ್ ಮಾಡಿದ್ದೇವೆ. ಸದ್ಯಕ್ಕೆ ಹೀರೋಯಿನ್ ಮತ್ತು ಟೈಟಲ್ ಎರಡೂ ಫೈನಲ್ ಆಗಿಲ್ಲ. ಒಟ್ಟಿನಲ್ಲಿ ಕನ್ನಡದ ನಟಿಯರೇ ಈ ಸಿನಿಮಾದ ಹೀರೋಯಿನ್ ಆಗಲಿದ್ದಾರೆ. ಆದಷ್ಟು ಬೇಗ ಈ ಸಿನಿಮಾದ ಟೈಟಲ್, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ:ಯೋಗ ನಿರೋಗ : ಸೇತು ಬಂಧಾಸನ
“ಧೀಮಾ ಎಂಟರ್ಟೈನ್ಮೆಂಟ್’ ಮತ್ತು “ಎಲ್ಎನ್ಆರ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಮದನ್ ಕುಮಾರ್ ಮತ್ತು ಲಕ್ಷ್ಮೀನಾರಾಯಣ ಅರಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಬೆಂಗಳೂರು ಸುತ್ತಮುತ್ತವೇ ನಡೆಯಲಿದೆಯಂತೆ. ಶಿವರಾತ್ರಿ ಹಬ್ಬದ ಬಳಿಕ ಈ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಚಿತ್ರದ ಹಾಡುಗಳಿಗೆ ವಿ. ಶ್ರೀಧರ್ ಸಂಭ್ರಮ್ ಸಂಗೀತ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ಸುಮಾರು 50 ದಿನ ಶೂಟಿಂಗ್ಗೆ ಪ್ಲಾನ್ ಹಾಕಿಕೊಂಡಿದ್ದಾರೆ ದೀಪಕ್ ಗಂಗಾಧರ್.