ಡೆಲಿವರಿ ಬಾಯ್ಸ್ ಕೈಯಿಂದ ಹೊರಬಂದ ಟ್ರೇಲರ್: ದರ್ಶನ ನೀಡಲು ‘ಡಿಯರ್ ಸತ್ಯ’ ರೆಡಿ
Team Udayavani, Sep 4, 2021, 2:07 PM IST
ಸಾಮಾನ್ಯವಾಗಿ ಸಿನಿಮಾಗಳ ಟ್ರೇಲರ್ನ ಸ್ಟಾರ್, ಸೆಲೆಬ್ರಿಟಿಗಳು ಬಿಡುಗಡೆ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತಮ್ಮ ಚಿತ್ರದ ಟ್ರೇಲರ್ನ ಡೆಲಿವರಿ ಬಾಯ್ಸ್ ಕೈಯಿಂದ ಬಿಡುಗಡೆ ಮಾಡಿಸಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಡಿಯರ್ ಸತ್ಯ’.
ಇನ್ನು ಹೀಗೆ ಡೆಲಿವರಿ ಬಾಯ್ಸ್ ಕೈಯಿಂದ ಟ್ರೇಲರ್ ಬಿಡುಗಡೆ ಮಾಡಿಸಲುಕಾರಣವಿದೆ. “ಡಿಯರ್ ಸತ್ಯ’ ಚಿತ್ರದ ನಾಯಕ ಸಂತೋಷ್ ಆರ್ಯನ್ ಈ ಚಿತ್ರದಲ್ಲಿ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ನ ಬೆಂಗಳೂರಿನಲ್ಲಿ ಆಹಾರವನ್ನು ತಲುಪಿಸುವ ಡೆಲಿವರಿ ಬಾಯ್ಸ್ ಕೈಯಿಂದ ಚಿತ್ರತಂಡ ಬಿಡುಗಡೆ ಮಾಡಿಸಿದೆ.
ಸಂತೋಷ್ ಆರ್ಯನ್ ಬರ್ತ್ಡೇ ಪ್ರಯುಕ್ತ “ಡಿಯರ್ ಸತ್ಯ’ ಚಿತ್ರದ ಫಸ್ಟ್ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ ಸೆಪ್ಟೆಂಬರ್ ಕೊನೆಯೊಳಗೆ “ಡಿಯರ್ ಸತ್ಯ’ನನ್ನು ಥಿಯೇಟರ್ ಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಇದನ್ನೂ ಓದಿ:ಅಖಾಡಕ್ಕೆ ಇಳಿದ ಹೊಸಬರು: ಸೆಪ್ಟೆಂಬರ್ನಲ್ಲಿ ನವವೈಭವ
ಟ್ರೇಲರ್ ಬಿಡುಗಡೆಯ ಬಳಿಕ ಮಾತನಾಡಿದ ನಾಯಕ ಸಂತೋಷ್ ಆರ್ಯನ್, “ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. “ಕಲ್ಲರಳಿ ಹೂವಾಗಿ’ ಮೂಲಕ ಪೋಷಕ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿ ಆ ನಂತರ “ನೂರು ಜನ್ಮಕ್ಕು’ ಸಿನಿಮಾದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಆನಂತರ ಒಂದಷ್ಟು ಜನ ನನಗೆ ಸಹಾಯ ಮಾಡಿದರು. ಈ ಸಿನಿಮಾದಲ್ಲಿ ನಾನೂ ಕೂಡ ಒಬ್ಬ ನಿರ್ಮಾಪಕನಾಗಿದ್ದೇನೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ’ ಎಂದರು.
ಈ ಹಿಂದೆ “ಜಿಗರ್ಥಂಡ’, “ತ್ರಾಟಕ’, “ಆ ದೃಶ್ಯ’ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವ ಗಣೇಶ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಶಿವ ಗಣೇಶ್, “ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾವನ್ನು ನಿರ್ದೇಶಿಸಬೇಕು ಅಂದುಕೊಳ್ಳುವ ಸಮಯದಲ್ಲಿ ಸಂತೋಷ್ ಭೇಟಿಯಾದರು. ನಂತರ ಈ ಸಿನಿಮಾ ಶುರುವಾಯ್ತು. ಸಿನಿಮಾ ತುಂಬಾ ಅಚ್ಚುಕಟ್ಟಾಗಿ ಬಂದಿದ್ದು, ಆಡಿಯನ್ಸ್ಗೂ ಇಷ್ಟವಾಗುವುದೆಂಬ’ ವಿಶ್ವಾಸ ವ್ಯಕ್ತಪಡಿಸಿದರು.
“ಡಿಯರ್ ಸತ್ಯ’ ಚಿತ್ರಕ್ಕೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಂತೋಷ್ ಆರ್ಯನ್ಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.