ಅಗಲಿದ ಗೆಳೆಯನಿಗೆ ಶ್ರದ್ಧಾಂಜಲಿ
Team Udayavani, Feb 10, 2018, 6:10 PM IST
ಇತ್ತೀಚೆಗೆ ನಿಧನರಾದ ಹಿರಿಯ ನಟ “ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್ ಅವರ ಆತ್ಮಕ್ಕೆ ಶಾಂತಿ ಕೋರಿ ಅವರ ಗೆಳೆಯರು, ಬಂಧುಗಳು ಮತ್ತು ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಭೆ ನಡೆಸಿದರು. ಮಲ್ಲೇಶ್ವರಂನಲ್ಲಿರುವ ಶಂಕರಮಠದಲ್ಲಿ ಶನಿವಾರ ಬೆಳಗ್ಗೆ ಚಂದ್ರಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಲಾಯಿತು.
ಶ್ರದ್ಧಾಂಜಲಿ ಸಲ್ಲಿಸಿದ ವೇಳೆ, “ಚಂದ್ರಶೇಖರ್ ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿದ ಪ್ರತಿಯೊಬ್ಬರೂ, “ಚಂದ್ರಶೇಖರ್ ಎಲ್ಲರೊಂದಿಗೆ ಕುಟುಂಬದವರಂತೆಯೇ ಇದ್ದರು. ಸದಾ ನಗುತ್ತ, ನಗಿಸುತ್ತಲೇ ಮಾತನಾಡಿಸುತ್ತಿದ್ದರು. ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಚಂದ್ರಶೇಖರ್ ಅವರಿಗೆ ನಿರ್ದೇಶನ ಮಾಡುವ ಬಗ್ಗೆ ಬಹಳ ಆಸಕ್ತಿ ಇತ್ತು.
ಒಳ್ಳೆಯ ಚಿತ್ರ ಮಾಡಬೇಕೆಂದೇ ತಯಾರಿ ಮಾಡಿಕೊಳ್ಳುತ್ತಿದ್ದರು. ಮಗಳನ್ನೂ ಚಿತ್ರರಂಗಕ್ಕೆ ಪರಿಚಯಿಸುವ ಕನಸು ಕಟ್ಟಿಕೊಂಡಿದ್ದರು. ಅಂತಹ ವ್ಯಕ್ತಿ ಕಳೆದುಕೊಂಡಿದ್ದು ನೋವನ್ನುಂಟು ಮಾಡಿದೆ’ ಎಂದು ಅಲ್ಲಿದವರು ಚಂದ್ರಶೇಖರ್ ಅವರೊಂದಿಗಿನ ಒಡನಾಟ ಕುರಿತು ಮೆಲುಕು ಹಾಕಿದರು.
ಹಿರಿಯ ನಟ ಶ್ರೀನಾಥ್, ಜೈಜಗದೀಶ್, ಹೇಮಾಚೌದರಿ, ಸುಂದರ್ರಾಜ್, “ಸಿದ್ಲಿಂಗು’ ಶ್ರೀಧರ್, ಎಲ್.ವಿ.ಶಾರದ, ವೈ.ಕೆ. ಮುದ್ದುಕೃಷ್ಣ, ಹಿರಿಯ ಗಾಯಕಿ ಬಿ.ಕೆ.ಸುಮಿತ್ರ, ಚಿತ್ರ ಸಾಹಿತಿ ಎಂ.ಎನ್.ವ್ಯಾಸರಾವ್ ಸೇರಿದಂತೆ ಅನೇಕರು ಈ ವೇಳೆ ಉಪಸ್ಥಿತರಿದ್ದರು.