ತೋತಾಪುರಿ ಹಿಡಿದ ಧನಂಜಯ್
Team Udayavani, Jan 28, 2019, 5:40 AM IST
ಧನಂಜಯ್ “ಭೈರವಗೀತ’ ಬಳಿಕ ಮತ್ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಇದೀಗ “ತೋತಾಪುರಿ’ ಉತ್ತರವಾಗಿದೆ. ಹೌದು, ಜಗ್ಗೇಶ್ ಅಭಿನಯದ “ತೋತಾಪುರಿ’ ಚಿತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೆ ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಕೂಡ ನಡೆದಿದೆ. ಧನಂಜಯ್ ಇಲ್ಲಿ ಒಂದಲ್ಲ, ಎರಡಲ್ಲ, ಮೂರು ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಅಂದಹಾಗೆ, ಈ ಕುರಿತು ಮಾಹಿತಿ ನೀಡುವ ನಿರ್ದೇಶಕ ವಿಜಯ ಪ್ರಸಾದ್, “ಈಗಾಗಲೇ ಧನಂಜಯ್ ಅವರು “ತೋತಾಪುರಿ’ ಚಿತ್ರದ ಕೆಲ ಭಾಗದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಸೋಮವಾರ ಪೇಟೆಯಲ್ಲಿ ಸುಮಾರು 11 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಅದರಲ್ಲಿ ಧನಂಜಯ್ ಪಾಲ್ಗೊಂಡಿದ್ದರು. ಧನಂಜಯ್ ಅವರಿಗೆ ಇಲ್ಲಿ ಮೂರು ಹೊಸ ಗೆಟಪ್ ಇದೆ. ಗಡ್ಡ ಇರುವ ಗೆಟಪ್, ಇಲ್ಲದ ಗೆಟಪ್ ಮತ್ತು ಇನ್ನೊಂದು ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯಕ್ಕೆ ಧನಂಜಯ್ ಅವರು “ದುನಿಯಾ’ ಸೂರಿ ಅವರ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಅವರು ಮೀಸೆ ಇಲ್ಲದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಗೆಟಪ್ ಕೂಡ “ತೋತಾಪುರಿ’ ಚಿತ್ರದಲ್ಲಿರಲಿದೆ. ಮೈಸೂರು ಮತ್ತು ಸೋಮವಾರ ಪೇಟೆಯಲ್ಲಿ ನಡೆದ ಚಿತ್ರೀಕರಣದಲ್ಲಿ ಒಂದೊಂದು ಗೆಟಪ್ನಲ್ಲಿ ಧನಂಜಯ್ ಕಾಣಿಸಿಕೊಂಡಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
ಇನ್ನುಳಿದಂತೆ ಫೆಬ್ರವರಿ 3 ಅಥವಾ 5 ರಿಂದ ಇನ್ನೊಂದು ಹಂತದ ಚಿತ್ರೀಕರಣ ನಡೆಯಲಿದೆ. ಅದಾದ ಬಳಿಕ ಕೇರಳದಲ್ಲಿ ಚಿತ್ರೀಕರಣ ನಡೆಸುವ ತಯಾರಿ ಮಾಡಿಕೊಂಡಿದ್ದೇವೆ’ ಎಂದು ವಿವರ ಕೊಡುವ ನಿರ್ದೇಶಕ ವಿಜಯ ಪ್ರಸಾದ್, ಧನಂಜಯ್ ಈ ಚಿತ್ರದಲ್ಲಿ ನಾರಾಯಣ್ ಪಿಳೈ ಎಂಬ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರೊಬ್ಬ ಪೆಟ್ರೋಲ್ ಬಂಕ್ ಮಾಲೀಕರಾಗಿ ನಟಿಸುತ್ತಿದ್ದು, ಅವರಿಗೆ ಸುಮನ್ ರಂಗನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂಬುದು ನಿರ್ದೇಶಕರ ಮಾತು.
“ತೋತಾಪುರಿ’ ಚಿತ್ರಕ್ಕೆ “ತೊಟ್ ಕೀಳ್ಬೇಕಷ್ಟೇ’ ಎಂಬ ಅಡಿಬರಹವಿದೆ. ಇಲ್ಲಿ ಶೀರ್ಷಿಕೆ ಮತ್ತು ಅಡಿಬರಹ ಗಮನಿಸಿದರೆ, ಇದೊಂದು ಪಕ್ಕಾ ಮನರಂಜನೆ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ “ನೀರ್ದೋಸೆ’ ಮೂಲಕ ನಿರ್ದೇಶಕರು ಮಾಡಿದ ಮೋಡಿ ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕೆ ಕೆ.ಎ.ಸುರೇಶ್ ನಿರ್ಮಾಪಕರು. ಜಗ್ಗೇಶ್ ಅವರಿಗೆ ಅದಿತಿ ಪ್ರಭುದೇವ್ ಜೋಡಿಯಾಗಿದ್ದಾರೆ.
ಉಳಿದಂತೆ ಚಿತ್ರದಲ್ಲಿ ವೀಣಾಸುಂದರ್ ಇತರರು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಅದಿತಿ ಪ್ರಭುದೇವ್ ಇಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸುತ್ತಿದ್ದಾರೆ. ಇಲ್ಲಿ ತರಹೇವಾರಿ ಪಾತ್ರಗಳಿರುವುದರಿಂದ ಇದೊಂದು ವಿಡಂಬನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬುದು ಚಿತ್ರತಂಡದ ಮಾತು.