‘ಅದ್ದೂರಿ’ ಬಳಿಕ ಮತ್ತೊಮ್ಮೆ ಕಮಾಲ್ ಮಾಡಲು ಧ್ರುವ- ಅರ್ಜುನ್ ಸಜ್ಜು ?
Team Udayavani, Jun 17, 2021, 1:55 PM IST
‘ಅದ್ದೂರಿ’ ಕನ್ನಡ ಚಿತ್ರರಂಗಕ್ಕೆ ಧ್ರುವ ಸರ್ಜಾ ಅವರನ್ನು ಪರಿಚಯಿಸಿದ ಸಿನಿಮಾ. ಅಮೋಘವಾಗಿ ಶತದಿನೋತ್ಸವ ಕಂಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಎ.ಪಿ ಅರ್ಜುನ್ ಎನ್ನುವ ಪ್ರತಿಭಾವಂತ ನಿರ್ದೇಶಕ.
ಅದ್ಧೂರಿ ಸಿನಿಮಾ ಧ್ರುವ ಸರ್ಜಾ ಹಾಗೂ ಎ.ಪಿ ಅರ್ಜುನ್ ಅವರಿಗೂ ಗಾಂಧಿನಗರದಲ್ಲಿ ಒಳ್ಳೆಯ ನೇಮು ತಂದುಕೊಟ್ಟ ಸಿನಿಮಾ. ಈ ಚಿತ್ರ ಇತಿಹಾಸ ಬರೆದಿದ್ದು ಈ ಹಳೆಯ ವಿಚಾರ. ಹೊಸ ಮ್ಯಾಟರ್ ಏನಪ್ಪಾ ಅಂದ್ರೆ ಅದ್ಧೂರಿಯಲ್ಲಿ ಕಮಾಲ್ ಮಾಡಿದ್ದ ಈ ಜೋಡಿ ಮತ್ತೊಮ್ಮೆ ಒಂದಾಗಿ ಹೊಸ ಪ್ರಾಜೆಕ್ಟ್ ಗೆ ಸಿದ್ಧತೆ ನಡೆಸಿಕೊಂಡಿದೆಯಂತೆ.
ಹೌದು, ಪೊಗರು ಚಿತ್ರದ ನಂತರ ಧ್ರುವ ಸರ್ಜಾ ‘ದುಬಾರಿ’ ಚಿತ್ರ ಮಾಡಬೇಕಿತ್ತು. ಕಾರಣಾಂತರಳಿಂದ ಈ ಚಿತ್ರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಈ ನಡುವೆ ಧ್ರುವ ಸರ್ಜಾ ಅದ್ಧೂರಿ ಅರ್ಜುನ್ ಜೊತೆ ಸಿನಿಮಾ ಮಾಡುವ ಉತ್ಸುಕತೆ ತೋರಿಸಿದ್ದಾರಂತೆ.
ಧ್ರುವ, ಅರ್ಜುನ್ ಅವರ ಬಳಿಯೇ ಇನ್ನೊಂದು ಸಿನಿಮಾ ಮಾಡೋಕೆ ರೆಡಿಯಾಗಿದ್ದು, ಕಥೆ ಓಕೆ ಆಗಿದೆ ಎನ್ನಲಾಗುತ್ತಿದೆ. ನಿರ್ಮಾಪಕರಾಗಿ ಉದಯ್ ಕೆ.ಮೆಹ್ತಾ ಅವರೇ ಇರಲಿದ್ದಾರೆ. ಇನ್ನು ದುಬಾರಿ ಚಿತ್ರಕ್ಕೆ ನಾಯಕಿಯಾಗಿದ್ದ ಶ್ರೀಲೀಲಾ ಕೂಡಾ ಅರ್ಜುನ್ ಪರಿಚಯಿಸಿದ ನಾಯಕಿಯೇ. ನಾಯಕ, ನಾಯಕಿಯ ಬದಲಾವಣೆ ಮಾಡದೇ ಕಥೆ ಮತ್ತು ನಿರ್ದೇಶಕರನ್ನು ಚೇಂಜ್ ಮಾಡಿ ಹೊಸ ಸಿನಿಮಾ ರೆಡಿ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.