ಜಿಲ್ಲಾಧಿಕಾರಿಯಾದ ದಿಗಂತ್
ಯುವರತ್ನ ಬಳಗಕ್ಕೆ ಎಂಟ್ರಿ
Team Udayavani, Jul 18, 2019, 3:03 AM IST
ಸದ್ಯ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಅಂತಿಮ ಹಂತದ ಶೂಟಿಂಗ್ನಲ್ಲಿರುವ ನಟ ದಿಗಂತ್ ಹೊಸ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ. ಇಲ್ಲಿಯವರೆಗೆ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿರುವ ದಿಗಂತ್ ಈಗ ನಟ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಅಂದಹಾಗೆ, ಯುವರತ್ನ ಚಿತ್ರದಲ್ಲಿ ನಟ ದಿಗಂತ್ ಅವರದ್ದು ಬೆಂಗಳೂರು ಜಿಲ್ಲಾಧಿಕಾರಿ (ಡಿ.ಸಿ) ಪಾತ್ರವಂತೆ. ಚಿತ್ರದಲ್ಲಿ ಸುಮಾರು 40 ನಿಮಿಷ ಪುನೀತ್ ರಾಜಕುಮಾರ್ ಅವರ ಜೊತೆಗೇ ದಿಗಂತ್ ಪಾತ್ರ ಕೂಡ ಬರಲಿದೆ ಎನ್ನಲಾಗುತ್ತಿದೆ. ಇನ್ನು ಚಿತ್ರದಲ್ಲಿ ಡಿ.ಸಿ ಆಗಿರುವ ದಿಗಂತ್ ಅವರ ಮುಂದೆ ಹಲವು ಸಮಸ್ಯೆಗಳು ಎದುರಾಗಲಿದ್ದು, ಅದೆಲ್ಲವನ್ನೂ ಅವರು ಹೇಗೆ ನಿಭಾಯಿಸಲಿದ್ದಾರೆ ಅನ್ನೋದನ್ನ ಚಿತ್ರದ ಪಾತ್ರ ಹೇಳಲಿದೆಯಂತೆ.
ಜೊತೆಗೆ ಚಿತ್ರಕ್ಕೆ ದಿಗಂತ್ ಅವರ ಪಾತ್ರ ಮಹತ್ವದ ತಿರುವು ನೀಡಲಿದೆಯಂತೆ. ಚಿತ್ರದ ಕಥೆ ಮತ್ತು ಪಾತ್ರ ಇಷ್ಟವಾದ ಕಾರಣ ಈ ಚಿತ್ರವನ್ನು ಮಾಡಲು ದಿಗಂತ್ ಇಪ್ಪಿಕೊಂಡಿದ್ದು, ಇದೇ ಜುಲೈ ಕೊನೆಯ ವಾರದಿಂದ ದಿಗಂತ್ ಅವರ ಭಾಗದ ಚಿತ್ರೀಕರಣ ನಡೆಯಲಿದೆ.
“ಯುವರತ್ನ’ ಚಿತ್ರಕ್ಕೆ ರಾಜಕುಮಾರ ಖ್ಯಾತಿಯ ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಪ್ರಕಾಶ್ ರೈ, ಧನಂಜಯ್, ಸೋನುಗೌಡ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.