ಸಿನಿಮಾ ಪ್ರದರ್ಶನಕ್ಕೆ ತಡೆ ಬೇಡ: ಮಾತುಕತೆಯ ಮೂಲಕ ಬಗೆಹರಿಸೋಣ
Team Udayavani, Jan 1, 2018, 11:25 AM IST
ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ಯಾವುದೇ ಸಿನಿಮಾಗಳಿಗೆ ತಡೆ ತರಬೇಡಿ, ಏನಾದರೂ ಸಮಸ್ಯೆ ಇದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಯಾವುದಾದರೂ ಚಿತ್ರದಲ್ಲಿ ಲೋಪವಿದೆ ಎಂದು ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಪರಿಣತರ ಸಮಿತಿ ಆ ಚಿತ್ರ ವೀಕ್ಷಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವಂತಹ ವ್ಯವಸ್ಥೆಯನ್ನು ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನ್ಯಾಯಾಲಯ ಹಾಗೂ ವಕೀಲರ ಸಂಘವನ್ನು ಮನವಿ ಮಾಡಿದ್ದಾರೆ.
ವಕೀಲರಿಗೆ ಅವಮಾನವಾಗುವಂತಹ ಸಂಭಾಷಣೆ ಇದೆ ಎಂದು ವಕೀಲರೊಬ್ಬರು “ಅಂಜನಿಪುತ್ರ’ ಚಿತ್ರಕ್ಕೆ ತಡೆ ತಂದು, ಚಿತ್ರ ಪ್ರದರ್ಶನ ಒಂದು ದಿನದ ಮಟ್ಟಿಗೆ ರದ್ದಾಗಿತ್ತು. ಈಗ ಮತ್ತೆ ಎಂದಿನಂತೆ ಚಿತ್ರ ಪ್ರದರ್ಶನ ಪ್ರಾರಂಭವಾಗಿದೆ. ಈ ಕುರಿತಾಗಿ ಮಾತನಾಡಿದ ಸಾ.ರಾ.ಗೋವಿಂದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಕ್ಕೆ ತಡೆ ತಂದರೆ ಆ ಚಿತ್ರದ ನಿರ್ಮಾಪಕನಿಗೆ ಸಾಕಷ್ಟು ನಷ್ಟವಾಗುತ್ತದೆ. ಅದರ ಬದಲು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು.
ವಾಣಿಜ್ಯ ಮಂಡಳಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ಸಿದ್ಧ. ನಾನು ವಕೀಲರ ಸಂಘ ಹಾಗೂ ನ್ಯಾಯಾಲಯದಲ್ಲಿ ಮನವಿ ಮಾಡುತ್ತೇನೆ, ಯಾವುದೇ ಸಿನಿಮಾಕ್ಕೂ ತಡೆ ತರುವ ಮೊದಲು ಚಿತ್ರವನ್ನು ಎಕ್ಸಪರ್ಟ್ ಸಮಿತಿ ನೋಡಲಿ. ಆ ನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ಈ ಕುರಿತು ಮುಂದಿನ ದಿನಗಳಲ್ಲಿ ವಕೀಲರ ಸಂಘಕ್ಕೆ ಮಂಡಳಿಯಿಂದ ಪತ್ರ ಮುಖೇನ ಮನವಿ ಕೂಡಾ ಮಾಡುತ್ತೇನೆ.
ನಮಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ. ಆದರೆ, “ಅಂಜನಿಪುತ್ರ’ದಲ್ಲಿನ ಸಂಭಾಷಣೆಯನ್ನು ಕಟ್ ಮಾಡಿ, ಮತ್ತೆ ಸೆನ್ಸಾರ್ ಮಾಡಿಸುವಲ್ಲಿ ತಡವಾಗಿದೆಯೇ ಹೊರತು, ಯಾರು ಕೂಡಾ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾಗಳ ಕಾನೂನು ತೊಡಕನ್ನು ಆದಷ್ಟು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದ್ದಾರೆ.