ಸೆಪ್ಟೆಂಬರ್ನಲ್ಲಿ “ದ್ರೋಣ’ ದರ್ಶನ
ಪಾಠ ಹೇಳಲು ಬರುತ್ತಿದ್ದಾರೆ ಶಿವಣ್ಣ
Team Udayavani, Jul 17, 2019, 3:03 AM IST
ಇತ್ತೀಚೆಗಷ್ಟೇ ನಟ ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. “ರುಸ್ತುಂ’ ಚಿತ್ರದಲ್ಲಿ ಶಿವಣ್ಣ ಅಭಿನಯ ನೋಡಿ ಫಿದಾ ಆಗಿರುವ ಅಭಿಮಾನಿಗಳಿಗೆ ಶೀಘ್ರದಲ್ಲಿಯೇ ನಟ ಶಿವರಾಜ ಕುಮಾರ್ “ದ್ರೋಣ’ನಾಗಿ ದರ್ಶನ ಕೊಡಲಿದ್ದಾರೆ.
ಹೌದು, ಶಿವರಾಜಕುಮಾರ್ ಅಭಿನಯದ ಮುಂಬರುವ ಚಿತ್ರ “ದ್ರೋಣ’ ಸದ್ಯ ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ನಡೆಸುತ್ತಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಚಿತ್ರವನ್ನು ಇದೇ ಸೆಪ್ಟೆಂಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
“ಡಾಲ್ಫಿನ್ ಮೀಡಿಯಾ ಹೌಸ್’ ಬ್ಯಾನರ್ನಲ್ಲಿ ಮಹದೇವ್ ಬಿ, ಸಂಗಮೇಶ ಬಿ, ಶೇಶು ಚಕ್ರವರ್ತಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ದ್ರೋಣ’ ಚಿತ್ರದಲ್ಲಿ ಶಿವಣ್ಣ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ದ್ರೋಣ’ ಚಿತ್ರದಲ್ಲಿ ಐದು ಹಾಡುಗಳು, ಎರಡು ಜಬರ್ದಸ್ತ್ ಆ್ಯಕ್ಷನ್ ದೃಶ್ಯಗಳಿವೆ.
ಚಿತ್ರದಲ್ಲಿ ಶಿವರಾಜ ಕುಮಾರ್ ಅವರಿಗೆ ನಾಯಕಿಯಾಗಿ ಇನಿಯಾ ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್, ನಾರಾಯಣ ಸ್ವಾಮಿ, ವಿಜಯ್, ಜಯಶ್ರೀ ಕೃಷ್ಣನ್, ಮಾ. ಮಹೆಂದ್ರ, ರವಿಕಿಶನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ದ್ರೋಣ’ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಜೆ.ಎಸ್ ವಾಲಿ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರಾಮ್ಕ್ರಿಶ್ ಸಂಗೀತ ಸಂಯೋಜಿಸಿದ್ದಾರೆ. ವಿ. ಮನೋಹರ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
ಚಿತ್ರಕ್ಕೆ ಆನಂದ್ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ. ಒಟ್ಟಾರೆ “ರುಸ್ತುಂ’ನಲ್ಲಿ ಖಾಕಿ ಖದರ್ನಲ್ಲಿ ಶಿಳ್ಳೆ ಗಿಟ್ಟಿಸಿಕೊಂಡಿದ್ದ ಶಿವಣ್ಣ, “ದ್ರೋಣ’ನಾಗಿ ಎಷ್ಟರ ಮಟ್ಟಿಗೆ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.