ಚಿತ್ರೀಕರಣ ಮುಗಿಸಿದ ದೃಶ್ಯ -2
Team Udayavani, Aug 26, 2021, 11:06 AM IST
ಸಾಮಾನ್ಯವಾಗಿ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರಿಗೆ ತಾವು ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ಮತ್ತಿತರ ಕೆಲಸಗಳು ಮುಗಿದರೆ ಖುಷಿಯಾಗುತ್ತದೆ. ಕೆಲಸ ಮುಗಿಸಿದ ಖುಷಿಯಲ್ಲಿ ಅನೇಕರು ರಿಲ್ಯಾಕ್ಸ್ ಮೂಡ್ಗೆ ಜಾರುತ್ತಾರೆ. ಆದರೆ “ದೃಶ್ಯ-2′ ಚಿತ್ರದ ಶೂಟಿಂಗ್ ಮುಗಿದಿದ್ದು ನಟ ಕ್ರೇಜಿಸ್ಟಾರ್ ಬೇಸರಕ್ಕೆ ಕಾರಣವಾಗಿದೆಯಂತೆ!
ಹೌದು, ಸ್ವತಃ ರವಿಚಂದ್ರನ್ ಅವರೇ ಈ ಮಾತನ್ನು ಹೇಳಿದ್ದಾರೆ. ಅದಕ್ಕೆ ಕಾರಣ “ದೃಶ್ಯ-2′ ಚಿತ್ರತಂಡದ ಜೊತೆಗಿದ್ದ ಒಡನಾಟ. “ಅನೇಕರಿಗೆ ಗೊತ್ತಿರುವಂತೆ ಇದು ಫ್ಯಾಮಿಲಿ ಸ್ಟೋರಿ ಇರುವ ಸಿನಿಮಾ. ಈ ಫ್ಯಾಮಿಲಿ ಸ್ಟೋರಿಯನ್ನು ನಮ್ಮ ಸಿನಿಮಾ ತಂಡ ಕೂಡ ಒಂದುಕುಟುಂಬವಾಗಿ, ಒಬ್ಬರಿಗೊಬ್ಬರು ಬೆಂಬಲಿಸುತ್ತಾ, ಸಹಾಯ ಮಾಡುತ್ತಾ ಮಾಡಿದ್ದೇವೆ. ಸ್ಕ್ರೀನ್ ಮೇಲೆ ಹೇಗೋ ಸ್ಕ್ರೀನ್ ಹೊರಗೂ “ದೃಶ್ಯ’ ಚಿತ್ರತಂಡ ಒಂದು ಕುಟುಂಬದಂತೆ ಆಗಿಬಿಟ್ಟಿದೆ. ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರತಂಡ ಇದಾಗಿತ್ತು. ನಮಗೆ ಗೊತ್ತಿಲ್ಲದಂತೆ ಸಿನಿಮಾದ ಶೂಟಿಂಗ್ ಮುಗಿದು ಹೋಯ್ತು. ಇಷ್ಟು ಬೇಗ ಶೂಟಿಂಗ್ ಮುಗಿಯಿತಲ್ಲ, ಇನ್ನು ನಾವುಗಳು ಒಬ್ಬರನ್ನೊಬ್ಬರು ನಾಳೆಯಿಂದ ಭೇಟಿ ಆಗುವುದಿಲ್ಲ ಅಂಥ ಬೇಸರವಾಗುತ್ತಿದೆ’ ಎಂದರು.
ಕೆಲ ದಿನಗಳ ಹಿಂದಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಾಗಿ ಅಭಿನಯಿಸುತ್ತಿರುವ “ದೃಶ್ಯ-2′ ಸಿನಿಮಾ ಸೆಟ್ಟೇರಿದ್ದು ನಿಮಗೆ ಗೊತ್ತಿರಬಹುದು. ಇದೀಗ ಸದ್ದಿಲ್ಲದೆ ಆ ಸಿನಿಮಾದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ರವಿಚಂದ್ರನ್ ಅವರ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಟಿ ನವ್ಯಾ ನಾಯರ್ ತಮ್ಮ ಅನುಭವ ಹಂಚಿಕೊಂಡರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪಿ. ವಾಸು, “ನಮ್ಮ ಪ್ಲಾನ್ ಪ್ರಕಾರ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಶುರುವಾಗಲಿದೆ. ಕನ್ನಡದ ನೇಟಿವಿಟಿಕೆ ತಕ್ಕಂತೆ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಿನಿಮಾ ಬಂದಿದೆ. ಆದಷ್ಟು ಬೇಗ “ದೃಶ್ಯ-2’ನ್ನು ತೆರೆಗೆ ತರಲಿದ್ದೇವೆ. ಏಳು ವರ್ಷದ ಬಳಿಕ ಸೀಕ್ವೆಲ್ ಸಿದ್ಧವಾಗಿದ್ದು, ಅಂದು ರವಿಚಂದ್ರನ್ ಹೇಗಿದ್ದರೋ, ಇಂದೂ ಹಂಗೇ ಇದ್ದಾರೆ. ಇದನ್ನ ಸೀಕ್ವೆಲ್ ಅನ್ನೋದಕ್ಕಿಂತ ಪ್ರೀಕ್ವೆಲ್ ಎನ್ನಬಹುದು’ ಎಂದರು