ಫಿಲಂ ಚೇಂಬರ್ ನೂತನ ಪದಾಧಿಕಾರಿಗಳ ಪದಗ್ರಹಣ
Team Udayavani, Jul 1, 2019, 2:59 AM IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಜೈರಾಜ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು. ಅವರೊಂದಿಗೆ ಉಳಿದ ಸ್ಥಾನಗಳಿಗೂ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಅವರು, ನೂತನ ಅಧ್ಯಕ್ಷ ಜೈರಾಜ್ ಅವರಿಗೆ ಶುಭಾಶಯ ತಿಳಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ವಹಿಸಿಕೊಂಡ ಜೈರಾಜ್ ಅವರು, “ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿಕೊಂಡರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಉಮೇಶ್ ಬಣಕಾರ್, (ನಿರ್ಮಾಪಕ ವಲಯ), ಬಿ.ಎಲ್.ನಾಗಣ್ಣ (ವಿತರಕ ವಲಯ), ವೆಂಕಟರಮಣ ಬಾಬ್ಜಿ (ಪ್ರದರ್ಶಕ ವಲಯ) ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಎನ್.ಎಂ. ಸುರೇಶ್ (ನಿರ್ಮಾಪಕರ ವಲಯ), ಎ.ಗಣೇಶ್ (ವಿತರಕ ವಲಯ), ನರಸಿಂಹಲು (ಪ್ರದರ್ಶಕರ ವಲಯ) ಹಾಗು ಖಜಾಂಚಿ ಸ್ಥಾನಕ್ಕೆ ಆಯ್ಕೆಯಾದ ಸಫೈರ್ ವೆಂಕಟೇಶ್ ಅವರುಗಳು ಸಹ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕೆ.ವಿ.ಚಂದ್ರಶೇಖರ್, ಕರಿಸುಬ್ಬು, ಎಂ.ಜಿ.ರಾಮಮೂರ್ತಿ, ಕೆ.ಎಂ.ವೀರೇಶ್, ನಟ ಸುಂದರ್ರಾಜ್ ಇತರರು ಪದಗ್ರಹಣ ಮಾಡಿದ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.