ಗಾಂಧಿ ಅಭಿಮಾನಿ ನಾಥೂರಾಮ್
Team Udayavani, Dec 16, 2018, 11:22 AM IST
ಇತ್ತೀಚೆಗೆ ನಿರ್ದೇಶಕ ರಿಷಭ್ ಶೆಟ್ಟಿ ಹೆಸರು ನಿರ್ದೇಶನಕ್ಕಿಂತ ಹೆಚ್ಚಾಗಿ ಅಭಿನಯದಲ್ಲೆ ಕೇಳಿ ಬರುತ್ತಿದೆ. ಸದ್ಯ ರಿಷಭ್ ಶೆಟ್ಟಿ ಅಭಿನಯಿಸಿರುವ “ಬೆಲ್ ಬಾಟಂ’ ಚಿತ್ರದ ಚಿತ್ರೀಕರಣ ಮುಗಿದು, ಚಿತ್ರ ಪೋಸ್ಟ್ ಪ್ರೊಡಕ್ಷನ್ನ ಅಂತಿಮ ಹಂತದಲ್ಲಿದೆ. ಇದರ ನಡುವೆಯೇ ರಿಷಭ್ ಶೆಟ್ಟಿ ಅಭಿನಯದ ಮತ್ತೂಂದು ಚಿತ್ರ “ನಾಥೂರಾಮ್’ ಸೆಟ್ಟೇರಿದೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನು ಬಳಂಜ “ನಾಥೂರಾಮ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಮೂಲಕ ವಿನು ಬಳಂಜ ಹಿರಿತೆರೆಯಲ್ಲೂ ಹೊಸ ಇನ್ನಿಂಗ್ಸ್ ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ರಕ್ಷಿತ್ ಶೆಟ್ಟಿ ಹಾಜರಿದ್ದು, “ನಾಥೂರಾಮ್’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇನ್ನು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ ಚಿತ್ರತಂಡ, ಚಿತ್ರದ ಹೆಸರು “ನಾಥೂರಾಮ್’ ಅಂತಿದ್ದರೂ, ನಾಥೊರಾಮ್ ಗೋಡ್ಸೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ಚಿತ್ರದ ನಾಯಕ ನಾಥೂರಾಮ್ ಗಾಂಧೀಜಿ ಅವರ ಅಭಿಮಾನಿಯಾಗಿರುತ್ತಾನೆ. ಗಾಂಧಿಯ ತತ್ವಗಳನ್ನು ತನ್ನ ಜೀವನದಲ್ಲೂ ಅಳವಡಿಸಿಕೊಂಡಿರುತ್ತಾನೆ. ಇಂಥ ನಾಯಕನ ಬದುಕಿನಲ್ಲಿ ನಂತರ ಏನೇನು ಬೆಳವಣಿಗೆಗಳಾಗುತ್ತವೆ ಎನ್ನುವುದೇ “ನಾಥೂರಾಮ್’ ಚಿತ್ರದ ಎಳೆ ಎನ್ನುತ್ತದೆ ಚಿತ್ರತಂಡ. ಇದೇ ಡಿಸೆಂಬರ್ ಅಂತ್ಯದಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಸುಮಾರು 50 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಸದ್ಯ ಚಿತ್ರದ ನಾಯಕಿಯ ಆಯ್ಕೆ ಅಂತಿಮ ಹಂತದಲ್ಲಿದ್ದು, ಕೆಲ ದಿನಗಳಲ್ಲಿ ನಾಯಕಿಯ ಹೆಸರನ್ನು ಘೋಷಿಸುವುದಾಗಿ ತಿಳಿಸಿದೆ ಚಿತ್ರತಂಡ.
ಉಳಿದಂತೆ ರಿಷಭ್ ಶೆಟ್ಟಿ ಅವರೊಂದಿಗೆ ಕಿಶೋರ್ ಕುಮಾರ್, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ ಮೊದಲಾದ ಕಲಾವಿದರ ತಾರಾಗಣವಿದೆ. ಚಿತ್ರದ ಹಾಡುಗಳಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಮಾಸ್ತಿ ಸಂಭಾಷಣೆ ಇದೆ. ಈ ಹಿಂದೆ “ರಂಗಿತರಂಗ’ ಚಿತ್ರ ನಿರ್ಮಿಸಿರುವ ಹೆಚ್.ಕೆ ಪ್ರಕಾಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.