ಗರುಡ ಗಮನ ವೃಷಭ ವಾಹನ
ರಾಜ್ ಶೆಟ್ಟಿ ಹೊಸ ಚಿತ್ರ
Team Udayavani, Feb 15, 2020, 7:03 AM IST
“ಒಂದು ಮೊಟ್ಟೆಯ ಕಥೆ’- ಹೊಸ ಬಗೆಯ ಕಥೆ, ನಿರೂಪಣೆಯಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಚಿತ್ರ. ಈ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ಎಂಬ ಪ್ರತಿಭೆ ಪರಿಚಯವಾಗಿದ್ದು ಗೊತ್ತೇ ಇದೆ. ಆ ಚಿತ್ರದ ನಿರ್ದೇಶನದ ನಂತರ ರಾಜ್ ಬಿ ಶೆಟ್ಟಿ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅನೇಕರಿಗಿತ್ತು. ಆದರೆ, ರಾಜ್ ಶೆಟ್ಟಿ ಮಾತ್ರ ಸಿನಿಮಾ ನಟನೆಯಲ್ಲೇ ಬಿಝಿಯಾಗಿಬಿಟ್ಟಿದ್ದರು.
ಈಗ ಸದ್ದಿಲ್ಲದೇ ತಮ್ಮ ನಿರ್ದೇಶನದ ಹೊಸ ಸಿನಿಮಾದ ಫಸ್ಟ್ಲುಕ್ ರಿಲೀಸ್ ಮಾಡಿದ್ದಾರೆ. “ಗರುಡ ಗಮನ ವೃಷಭ ವಾಹನ’ ಇದು ರಾಜ್ ಬಿ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾದ ಟೈಟಲ್. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣವೂ ಮುಗಿದಿದೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಓಕೆ, ಚಿತ್ರದ ಟೈಟಲ್ನ ವಿಶೇಷತೆ ಏನು, ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು.
ಈ ಬಗ್ಗೆ ಮಾತನಾಡುವ ರಾಜ್ ಶೆಟ್ಟಿ, “ಇದು ಮಂಗಳೂರು ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್ಸ್ಟಾರ್ ಕಥೆ. ಆರಂಭದಲ್ಲಿ ನಾವು “ಹರಿಹರ’ ಎಂಬ ಟೈಟಲ್ ಅಂದುಕೊಂಡಿದ್ದೆವು. ಅದಕ್ಕೆ ಕಾರಣ ವಿಷ್ಣು ಹಾಗೂ ಶಿವ ಅವರ ಗುಣ. ಅವರ ಗುಣವನ್ನು ಇಬ್ಬರು ಹೀರೋಗಳಿಗೆ ಅನ್ವಯಿಸಿದರೆ ಹೇಗಿರುತ್ತದೆ ಎಂದುಕೊಂಡು ಆ ಟೈಟಲ್ ಇಟ್ಟೆವು. ಆದರೆ, ಸಿನಿಮಾ ಮಾಡುತ್ತಾ, ಟೈಟಲ್ ಸಿಂಪಲ್ ಅನಿಸಿತು. ಹಾಗಾಗಿ “ಗರುಡ ಗಮನ ವೃಷಭ ವಾಹನ’ ಇಟ್ಟೆವು.
ಇದು ಎರಡು ಪಾತ್ರಗಳನ್ನು ಸೂಚಿಸುತ್ತದೆ’ ಎನ್ನುವುದು ರಾಜ್ ಶೆಟ್ಟಿ ಮಾತು. ಈ ಬಾರಿ ಚಿತ್ರದ ನಿರ್ಮಾಣವನ್ನು ಸ್ನೇಹಿತರ ಜೊತೆ ಸೇರಿ ರಾಜ್ ಶೆಟ್ಟಿಯವರೇ ಮಾಡಿದ್ದಾರೆ. ಉಳಿದಂತೆ “ಒಂದು ಮೊಟ್ಟೆಯ ಕಥೆ’ ತಂಡವೇ ತಾಂತ್ರಿಕ ವರ್ಗದಲ್ಲಿ ಮುಂದುವರೆದಿದೆ. 35 ದಿನಗಳ ಕಾಲ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಜೂನ್ನಲ್ಲಿ ತೆರೆಗೆ ಬರಬಹುದು.