“ಸೆಪ್ಟೆಂಬರ್ 10′ ತೆರೆಗೆ ಬರಲು ತಯಾರು
Team Udayavani, Feb 29, 2020, 7:00 AM IST
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ “ಸೆಪ್ಟೆಂಬರ್ 10′ ಚಿತ್ರೀಕರಣ ಸಂಪೂರ್ಣ ಮಾಡಿಕೊಂಡು ಇದೀಗ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತಕ್ಕೆ ತಲುಪಿದೆ. “ಸೆಪ್ಟೆಂಬರ್ 10’ನ್ನು ವಿಶ್ವದಾದ್ಯಂತ ಆತ್ಮಹತ್ಯೆ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಚಿತ್ರದಲ್ಲಿ ಆತ್ಮಹತ್ಯೆ ತಡೆ ಕುರಿತಾದ ವಿಚಾರವಿರುವುದರಿಂದ ಚಿತ್ರಕ್ಕೆ “ಸೆಪ್ಟೆಂಬರ್ 10′ ಎಂದು ಹೆಸರಿಡಲಾಗಿದೆ.
ತೆಲೆಂಗಾಣದ ಪ್ರದೇಶದ ಕ್ಯಾಪ್ಟನ್ ಜಿ. ಜಿ ರಾವ್ ಅವರ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಾಯಿ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಏಳು ವಿಭಿನ್ನ ಸ್ಥಿತಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಹಿರಿಯ ನಟ ಶಶಿಕುಮಾರ್ ಈ ಚಿತ್ರದಲ್ಲಿ ಮನೋ ವೈದ್ಯನಾಗಿ ಅಭಿನಯಿಸಿದ್ದಾರೆ.
ರಮೇಶ್ ಭಟ್ ವಕೀಲರಾಗಿ, ಸಿಹಿಕಹಿ ಚಂದ್ರು ಮುಸ್ಲಿಂ ಮುಖಂಡರಾಗಿ, ಶಿವಕುಮಾರ್ ಕ್ರಿಶ್ಚಿಯನ್ ಫಾದರ್ ಆಗಿ, ರವೀಂದ್ರನಾಥ್ ಪೊಲೀಸ್ ಅಧಿಕಾರಿ ಆಗಿ, ಗಣೇಶ್ ರಾವ್ ಶ್ರೀಮಂತ ವ್ಯಾಪಾರಿ ಆಗಿ ಮತ್ತು ಇವರ ಜೊತೆ ಜಯಸಿಂಹ, ಆರಾಧ್ಯಾ, ಶ್ರೀನಿವಾಸ್, ವಿಜಯ ಹಾಗೂ ಇತರರು ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಾರುತಿ ಮಿರಾಜ್ಕರ್ ಸಂಗೀತ ನಿರ್ದೇಶನ ಹಾಗೂ ಜೆ.ಜೆ ಕೃಷ್ಣ ಛಾಯಾಗ್ರಹಣ ಇದೆ.