ಉತ್ತರ ಕರ್ನಾಟಕ ಮಂದಿಯ ಸಿನಿಮಾ ‘ಗೋರಿ’ಯಲ್ಲಿ ಮಾನವೀಯತೆ ಪಾಠ
Team Udayavani, Nov 25, 2021, 3:47 PM IST
ಬಹುತೇಕ ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ “ಗೋರಿ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಖಾಸಗಿ ವಾಹಿಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ ಅನುಭವವಿರುವ ಕಿರಣ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಸದ್ಯ “ಗೋರಿ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿ ರುವ ಚಿತ್ರತಂಡ, ಕನಕ ಜಯಂತಿ ಸಂದರ್ಭದಲ್ಲಿ ಕಾಗಿನೆಲೆ ಕನಕಪೀಠದ ನಿರಂಜನಾ ನಂದ ಪುರಿ ಸ್ವಾಮಿಜಿಗಳ ಕೈಯಲ್ಲಿ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ.
ಇನ್ನು ಚಿತ್ರದ ಹಾಡುಗಳನ್ನು ಕೇಳಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ ಕಿರಣ್, “ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡಿದ್ದೇವೆ. ಎಲ್ಲ ಮನರಂಜನಾತ್ಮಕ ಅಂಶಗಳೂ ಸಿನಿಮಾದಲ್ಲಿದ್ದು, ಜೊತೆಗೊಂದು ಮೆಸೇಜ್ ಕೂಡ ಇದೆ. ಜಾತಿ-ಧರ್ಮಕ್ಕಿಂತ ಸ್ನೇಹ-ಪ್ರೀತಿ ದೊಡ್ಡದು, ಸ್ನೇಹ-ಪ್ರೀತಿಗಿಂತ ಮಾನವೀಯತೆ ದೊಡ್ಡದು ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಈಗಾಗಲೇ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್ ಯು ರಚ್ಚು ಚಿತ್ರದಲ್ಲಿ ಅಜೇಯ್ ರಾವ್ ಪುತ್ರಿ ನಟನೆ
“ಗೋರಿ’ ಚಿತ್ರದ ಟೈಟಲ್ಗೆ “ಪ್ರೀತಿಯ ಸಮಾಧಿ’ ಎಂಬ ಅಡಿ ಬರಹವಿದ್ದು, ಚಿತ್ರಕ್ಕೆ ಗೋಪಾಲಕೃಷ್ಣ ನಿರ್ದೇಶನ ಮಾಡಿದ್ದಾರೆ. ಚಿತ್ರತಂಡದ ಸದಸ್ಯರಾದ ಹನುಮಂತಪ್ಪ ಜಗ್ಗಿನ್, ಪಿ.ಡಿ ಪೂಜಾರ, ಸೋಮಣ್ಣ ಹೊಳಲು “ಗೋರಿ’ ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು. ಚಿತ್ರದ ನಾಲ್ಕು ಹಾಡುಗಳಿಗೆ ವೀನು ಮನಸು ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಹಾಡಿಗೆ ಮಾಲ್ತೇಶ್ ಹೆಚ್. ಜಗ್ಗಿನ್ ಸಾಹಿತ್ಯವಿದೆ. “ಗೋರಿ’ ಚಿತ್ರಕ್ಕೆ ಮಂಜುನಾಥ್ ಹೆಗಡೆ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ.