ಭಾಷೆ ಬಾಂಧವ್ಯ ಬೆಸೆಯುವ ಹಲ್ಮಿಡಿ ಚಿತ್ರ
Team Udayavani, Nov 15, 2018, 3:46 PM IST
“ಹಲ್ಮಿಡಿ ಶಾಸನ’ ಬಗ್ಗೆ ಕನ್ನಡ ಭಾಷಾಭಿಮಾನಿಗಳಿಗೆ ಗೊತ್ತಿರಲೇಬೇಕು. “ಹಲ್ಮಿಡಿ’ ಎಂಬ ಹೆಸರೇ ಕನ್ನಡ ಭಾಷಾಭಿಮಾನ ಮೂಡಿಸುವಂಥದ್ದು. ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಹಲ್ಮಿಡಿ ಶಾಸನಕ್ಕೆ ವಿಶೇಷ ಮಹತ್ವವಿದೆ. ಇಷ್ಟಕ್ಕೂ ಈ “ಹಲ್ಮಿಡಿ’ ಕುರಿತು ಇಷ್ಟೊಂದು ಪೀಠಿಕೆ ಹಾಕಲು ಕಾರಣವಿದೆ. “ಹಲ್ಮಿಡಿ’ ಶೀರ್ಷಿಕೆ ಇರುವ ಚಿತ್ರವೊಂದು ಸದ್ದಿಲ್ಲದೆಯೇ ಮುಗಿದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಎನ್.ಶಿವಾನಂದಂ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಟೆಕ್ನೋಮಾರ್ಕ್ ಸಂಸ್ಥೆಯ ನಿರ್ಮಾಣ ಈ ಚಿತ್ರಕ್ಕಿದೆ. ಡಾ.ಎಂ.ಮಹ್ಮದ್ ಭಾಷಾ ಗೂಳ್ಯಂ ಕಥೆ, ಸಂಭಾಷಣೆ ಬರೆದಿದ್ದಾರೆ.
“ಹಲಿ¾ಡಿ’ ಕನ್ನಡ ಭಾಷೆಯ ಪರಿಸ್ಥಿತಿ ಕುರಿತಂತೆ ಚಿಂತನೆ ನಡೆಸುವ ಕಥಾವಸ್ತು ಹೊಂದಿರುವ ಚಿತ್ರ. ಗಡಿ ಪ್ರದೇಶದ ಕನ್ನಡಿಗರ ವಾಸ್ತವತೆಯನ್ನು ಬಿಂಬಿಸುವ ಚಿತ್ರಣ ಇಲ್ಲಿದೆ. ನೆಲ, ಜಲ, ಭಾಷೆಯಂತಹ ಭಾವನಾತ್ಮಕ ವಿಷಯಗಳ ಸೂಕ್ಷ್ಮತೆಯ ಅಂಶಗಳು ಇಲ್ಲಿ ಮೇಳೈಸಿವೆ. ಸೌಹಾರ್ದ ಭಾವದಿಂದ ಬದುಕು ಸಾಗಿಸುವುದರ ಜೊತೆಗೆ ಕನ್ನಡತನದ ಹಿರಿಮೆ ಉಳಿಸಿಕೊಳ್ಳುವ ಸೂಕ್ಷ್ಮ ಪ್ರಕ್ರಿಯೆಗೆ ಪೂರಕವಾದ ಹೊಂದಾಣಿಕೆ ಹೇಗೆಲ್ಲಾ ಇರುತ್ತದೆ ಎಂಬ ಅಂಶಗಳು ಚಿತ್ರದ ಹೈಲೈಟ್. ಗಡಿ ಪ್ರದೇಶದಲ್ಲಿರುವ ತಾಳವಾಡಿ ಎಂಬ ಗ್ರಾಮ ತಮಿಳುನಾಡಿನಲ್ಲಿದ್ದರೂ, ಅಲ್ಲಿ ಕನ್ನಡಿಗರೇ ಬಹು ಸಂಖ್ಯಾತರು. ಅಲ್ಲಿನ ಕನ್ನಡ ಶಾಲೆಗಳಲ್ಲಿ ತಮಿಳರೂ ವಿದ್ಯಾಭ್ಯಾಸ ಮಾಡುತ್ತಿರುವದರಿಂದ ಕನ್ನಡ, ತಮಿಳು ದ್ವಿಭಾಷಾ ಸಂಸ್ಕೃತಿ ರಾರಾಜಿಸುತ್ತಿದ್ದು, ಎರಡು ರಾಜ್ಯಗಳ ಸೌಹಾರ್ದತೆಗೆ ಮಾದರಿಯಾಗಿದೆ. ಗಡಿ ಪ್ರದೇಶದ ವಿಶಿಷ್ಟ ಸಮಸ್ಯೆ ಎದುರಿಸುತ್ತಿರುವ “ತಾಳವಾಡಿ’ ಗ್ರಾಮದ ಜನರ ಬದುಕು, ಬವಣೆ, ಕನ್ನಡ ಪ್ರೇಮ, ಸೌಹಾರ್ದತೆ ಈ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕನ್ನಡದ ಹುಡುಗ ಮತ್ತು ತಮಿಳು ಹುಡುಗಿಯ ಶುದ್ಧ ಪ್ರೇಮ ಪ್ರಸಂಗದ ಅನಾವರಣವೇ ಈ “ಹಲಿ¾ಡಿ’ ಚಿತ್ರದ ಹೂರಣ ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಹಿರಿಯ ಕಲಾವಿದರಾದ ದತ್ತಣ್ಣ, ನೀನಾಸಂ ಅಶ್ವತ್ಥ್, ಮುನಿ, ನಿರಂಜನ್ ಕುಮಾರ್, ಪ್ರಿಯ ಕೆಸರೆ, ಪೃಥ್ವಿ, ರಾಧಾಶ್ರೀ ಇತರರು ನಟಿಸಿದ್ದಾರೆ. ಚಾಮರಾಜನಗರ ಸಮೀಪದ ಗಡಿ ಪ್ರದೇಶವಾದ ತಮಿಳುನಾಡಿಗೆ ಸೇರಿದ ತಾಳವಾಡಿ ಹಾಗು ಡಾ.ರಾಜಕುಮಾರ್ ಅವರ ಹುಟ್ಟೂರಾದ ಗಾಜನೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಬಿ.ಶರವಣ ಅವರ ಸಂಕಲನವಿದೆ. ಪಿ.ವಿ.ಆರ್. ಸ್ವಾಮಿ ಅವರ ಛಾಯಾಗ್ರಹಣವಿದೆ.ಎನ್.ಲಕ್ಷ್ಮೀ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.