ದಸರಾ ಸಂಭ್ರಮದ ಜೊತೆ ಚಿತ್ರಮಂದಿರಗಳಿಗೆ ಎಂಟ್ರಿ ಕೊಡ್ತಿದೆ ‘ಸಲಗ’
ಮಾಸ್ ಫ್ಯಾನ್ಗೆ ಹಬ್ಬ
Team Udayavani, Oct 14, 2021, 11:14 AM IST
ದುನಿಯಾ ವಿಜಯ್ ಎಕ್ಸೆ„ಟ್ ಆಗಿದ್ದಾರೆ, ಮೊದಲ ದಿನ, ಮೊದಲ ಕ್ಷಣದ ಕುತೂಹಲ ಅವರಲ್ಲಿದೆ. ಅದಕ್ಕೆ ಕಾರಣ “ಸಲಗ’. ಇದು ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ.
ಚಿತ್ರದ ಟೀಸರ, ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡಾ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ತಮ್ಮ ಬಹುನಿರೀಕ್ಷಿತ “ಸಲಗ’ ಬಗ್ಗೆ ಮಾತನಾಡುವ ವಿಜಯ್, “ನನಗೆ ಗೊತ್ತಿದೆ. ಬಹುತೇಕರು ನನ್ನ ಮೇಲೆ ಗಮನ ಇರಿಸಿದ್ದಾರೆ. ಯಾಕೆಂದರೆ, ವಿಜಯ್ ಮೊದಲ ಸಲ ನಿರ್ದೇಶನ ಮಾಡಿದ್ದಾನೆ. ಹೇಗೆಲ್ಲಾ ಮಾಡಿರಬಹುದು ಎಂಬ ನಿರೀಕ್ಷೆ ಇದೆ.
ಆ ನಿರೀಕ್ಷೆಗೆ ಕಾರಣ, ಈಗಾಗಲೇ ಸದ್ದು ಮಾಡಿರುವ ಹಾಡು, ಟೀಸರ್, ಪೋಸ್ಟರ್ಗಳು. ಹಾಗಾಗಿ ನಿರ್ದೇಶಕರಿಂದ ಹಿಡಿದು ನಟರು, ನಿರ್ಮಾಪಕರವರೆಗೂ “ಸಲಗ ‘ನ ಬಗ್ಗೆ ಮಾತಾಡುವಂತಾಗಿದೆ. ನನಗಂತೂ ನನ್ನ ಕೆಲಸದ ಮೇಲೆ ವಿಶ್ವಾಸವಿದೆ. ಎಲ್ಲರಿಗೂ ನನ್ನ ಕೆಲಸ ಹಿಡಿಸುತ್ತದೆ ಎಂಬ ನಂಬಿಕೆಯಲ್ಲೇ ಇದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ:– ಹುಮನಾಬಾದ: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು
ಚಿತ್ರದ ಕಥೆಯ ಬಗ್ಗೆ ಮಾತನಾಡುವ ವಿಜಯ್, “ಇದು “ದುನಿಯಾ’ ವಿಜಯ್ ಕಥೆ ಇರುವ ಸಿನಿಮಾವಂತೂ ಅಲ್ಲ, ಪ್ರತಿ ಮನೆಯಲ್ಲೂ ಒಬ್ಬ ಸಲಗ ಇರುತ್ತಾನೆ. ಅಂತಹ ಸಲಗನ ಕಥೆ ಇಲ್ಲಿದೆ. ಮನೆಯಲ್ಲಿರುವ ಗಂಡು ಆಗಬಹುದು ಹೆಣ್ಣೂ ಆಗಬಹುದು. ಅವರಿಗೆ ಹೋಲುವಂತಹ ಕಥೆ ಇದಾಗಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಿನಿಮಾವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ನುರಿತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರಿಂದ ತಕ್ಕಷ್ಟು ಅನುಭವ ಇದೆ. ಹಾಗಾಗಿ, ನನಗೆ ಭಯವಿಲ್ಲ.
ನನಗೆ ನಟನಾಗಿ ಗೆಲುವು ಸಿಕ್ಕಾಗಿದೆ. ಈಗ ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಆಸೆ ಇದೆ. ಅದು “ಸಲಗ ‘ ಮೂಲಕ ಆಗುತ್ತೆ ಎಂಬ ನಂಬಿಕೆ ಇದೆ. ಈ ನಂಬಿಕೆಗೆ ಕಾರಣ, ಕಥೆ. ಕಥೆ ಎಂಬುದು ನಿರ್ದೇಶಕನ ಧೈರ್ಯ. ಹಾಗಾಗಿ ನನ್ನ ಕಥೆ ಬಗ್ಗೆ ವಿಶ್ವಾಸವಿದೆ. ಎಲ್ಲರೂ ಈ “ಸಲಗ ‘ ನನ್ನು ಪ್ರೀತಿಸಿ, ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ ‘ ಎಂಬುದು ವಿಜಯ್ ಮಾತು.