ಕೊನೆಯ ಹಂತದ ಚಿತ್ರೀಕರಣದಲ್ಲಿ “ತಾರಕಾಸುರ’
Team Udayavani, Oct 30, 2017, 1:22 PM IST
ಶ್ರೀ ಮುರಳಿ ಅಭಿನಯದ “ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ ಬಂಡಿಯಪ್ಪ, ಈಗ ಹೊಸ ಹೀರೋನನ್ನು ಇಟ್ಟುಕೊಂಡು ಕೈಗೆತ್ತಿಕೊಂಡ “ತಾರಕಾಸುರ’ ಚಿತ್ರ ಇದೀಗ ಮುಗಿಯುವ ಹಂತಕ್ಕೆ ಬಂದಿದೆ. ಒಂದೆರೆಡು ದೃಶ್ಯಗಳು ಹಾಗು ನಾಲ್ಕು ಹಾಡುಗಳನ್ನು ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ. ಒಂದು ಹಾಡನ್ನು ಯುರೋಪ್ ಹಾಗು ಇನ್ನೊಂದು ಹಾಡನ್ನು ಮಹದೇಶ್ವರ ಬೆಟ್ಟದಲ್ಲಿ ಚಿತ್ರೀಕರಿಸಲಾಗುವುದು.
ಐದು ಹಾಡುಗಳ ಪೈಕಿ ಒಂದು ಹಾಡು ಚಿತ್ರೀಕರಣಗೊಂಡಿದ್ದು, ಉಳಿದ ಹಾಡುಗಳು ಚಿತ್ರೀಕರಣವಾಗಬೇಕಿದೆ. ಚಿತ್ರಕ್ಕೆ ಕುಮಾರ್ ಗೌಡ ಕ್ಯಾಮೆರಾ ಹಿಡಿದಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಮೂರು ಫೈಟ್ ಮಾಡಿದರೆ, ಜಾಲಿಬಾಸ್ಟಿನ್ ಒಂದು ಫೈಟ್ ಮಾಡಿಸಿದ್ದಾರೆ. ಧರ್ಮ ವಿಶ್ ಸಂಗೀತವಿದೆ.
ನೃತ್ಯ ನಿರ್ದೇಶಕ ಮುರಳಿ ಇಲ್ಲಿ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ. ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ್ ಭಟ್, ಚೇತನ್ ಕುಮಾರ್ ಹಾಗು ಹೊಸ ಹುಡುಗ ವಿನಾಯಕ್ ಹಾಡು ಬರೆದಿದ್ದಾರೆ. ಚಿತ್ರದಲ್ಲಿ ವೈಭವ್, ಮಾನ್ವಿತಾ ಹರೀಶ್, ಸಾಧು ಕೋಕಿಲ, ಡ್ಯಾನಿ ಸಪಾನಿ, ಕರಿಸುಬ್ಬು, ಎಂ.ಕೆ. ಮಠ ಮುಂತಾದವರು ನಟಿಸಿದ್ದಾರೆ.