ಒಂದು ಕಥೆ ಹೇಳ್ಲಾ ಅಂತಿದ್ದಾರೆ ಸಂಯುಕ್ತಾ
Team Udayavani, Apr 10, 2018, 11:42 AM IST
ಸಂಯುಕ್ತಾ ಹೊರನಾಡು ಈಗ ಒಂದು ಕಥೆ ಹೇಳಲು ಹೊರಟಿದ್ದಾರೆ. ಆ ಕಥೆ ಏ.11 ರಿಂದ ಶುರುವಾಗಲಿದೆ! ಯಾವ ಕಥೆಯ ಬಗ್ಗೆ ಹೇಳುತ್ತಿದ್ದೇವೆಂದು ನೀವು ಆಲೋಚಿಸಬಹುದು. ಇದು ಸಂಯುಕ್ತಾ ಅವರ ಹೊಸ ಸಿನಿಮಾದ ವಿಚಾರ. ಹೌದು, ಸಂಯುಕ್ತಾ ಹೊರನಾಡು ಸದ್ದಿಲ್ಲದೇ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.
“ಒಂದು ಕಥೆ ಹೇಳ್ಲಾ’ ಎಂಬ ಸಿನಿಮಾದಲ್ಲಿ ಸಂಯುಕ್ತಾ ನಟಿಸುತ್ತಿದ್ದು, ಚಿತ್ರಕ್ಕೆ ಬುಧವಾರ (ಏ.11) ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ತಮಿಳಿನ ಕೃಷ್ಣ ಸಾಯಿ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ಎರಡು ಸಿನಿಮಾ ಮಾಡಿರುವ ಕೃಷ್ಣ ಸಾಯಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಅಂದಹಾಗೆ, ಅವರು ನಿರ್ದೇಶಿಸಿರುವ ಎರಡೂ ತಮಿಳು ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಹೊಂದಿದ್ದ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಂಯುಕ್ತಾ ಅವರ ಪಾತ್ರ ಪ್ರಮುಖವಾಗಿರುತ್ತದೆ. ಉಳಿದಂತೆ ಚಿತ್ರದಲ್ಲಿ ಮನ್ದೀಪ್ ರಾಯ್, ವಿಜಯ್ ಚೆಂಡೂರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕೃಷ್ಣ ಸಾಯಿ, “ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ವಿಭಿನ್ನವಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾವಾಗುವ ವಿಶ್ವಾಸವಿದೆ’ ಎನ್ನುತ್ತಾರೆ.