ಜೀ ವಾಹಿನಿಯಲ್ಲಿ “ಕನ್ನಡ ಕಣ್ಮಣಿ’
Team Udayavani, Feb 19, 2019, 5:30 AM IST
ಜೀ ಕನ್ನಡ ವಾಹಿನಿಯಲ್ಲಿ ಮತ್ತೂಂದು ಮಕ್ಕಳ ರಿಯಾಲಿಟಿ ಶೋ ಶುರುವಾಗಲಿದೆ. ಫೆಬ್ರವರಿ 23 ರಿಂದ ಆರಂಭವಾಗಲಿರುವ “ಕನ್ನಡ ಕಣ್ಮಣಿ’ ರಿಯಾಲಿಟಿ ಶೋವನ್ನು ಈ ಬಾರಿ ನಟ ಜಗ್ಗೇಶ್, ಜಯಂತ್ ಕಾಯ್ಕಿಣಿ, ಗಂಗಾವತಿ ಪ್ರಾಣೇಶ್ ಕಾರ್ಯಕ್ರಮದ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಇನ್ನು, ಈ ಮಕ್ಕಳ “ಕಣ್ಮಣಿ’ ರಿಯಾಲಿಟಿ ಶೋವನ್ನು ಕಿರಿಕ್ ಕೀರ್ತಿ ನಿರೂಪಿಸುತ್ತಿದ್ದಾರೆ.
ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಮೇಲಿನ ಪ್ರೇಮ ಹಾಗೂ ಅಭಿಮಾನದ ಪ್ರತೀಕವಾಗಿ ಶುರುವಾಗುತ್ತಿರುವ ಈ ಹೊಸ ರಿಯಾಲಿಟಿ ಶೋಗಾಗಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆಸಲಾಗಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಆ ಆಡಿಷನ್ನಲ್ಲಿ ಭಾಗವಹಿಸಿದ್ದರು. ಆ ಪೈಕಿ ಉತ್ಸಾಹವಿರುವ ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ 14 ಜನ ಪ್ರತಿಭಾವಂತ ಮಕ್ಕಳನ್ನು ಆಯ್ಕೆಮಾಡಿಕೊಂಡು ವೇದಿಕೆಗೆ ಕರೆತರಲಾಗುತ್ತಿದೆ.
ಕನ್ನಡದ ಕಣ್ಮಣಿ ಇದೊಂದು ಅಪ್ಪಟ ಕನ್ನಡ ನೆಲದ ಟಾಕ್ ಶೋ ಆಗಿದ್ದು, ಇಲ್ಲಿ ಬರುವ ಮಕ್ಕಳು ಪ್ರೇಕ್ಷಕರಿಗೆ ಮನರಂಜನೆ ನೀಡುವ ಜೊತೆಗೆ ಸಾಕಷ್ಟು ಮಾಹಿತಿ ನೀಡುವುದು ವಿಶೇಷ. ಕಿರುತೆರೆ ಕ್ಷೇತ್ರದಲ್ಲಿ ಸದ್ಯಕ್ಕೆ ಈ ರಿಯಾಲಿಟಿ ಶೋ ಕುತೂಹಲ ಮೂಡಿಸಿದೆ. ಫೆ.23ರಿಂದ ಆರಂಭವಾಗಲಿರುವ ಈ “ಕನ್ನಡದ ಕಣ್ಮಣಿ’ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5.00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಜೀ ಕನ್ನಡ ವಾಹಿನಿಯು ಈಗಾಗಲೇ ಸಧಭಿರುಚಿಯ ಕಾರ್ಯಕ್ರಮಗಳನ್ನೇ ನೀಡುತ್ತಾ ಬಂದಿದ್ದು, “ಪಾರು’, “ಕಮಲಿ’, “ವಿಷ್ಣು ದಶಾವತಾರ’, “ಆತ್ಮಬಂಧನ’ ಸೇರಿದಂತೆ ಹಲವು ಬಗೆಯ ಧಾರಾವಾಹಿಗಳನ್ನು ಹಾಗೂ “ಡ್ರಾಮಾ ಜೂನಿಯರ್’, “ಕಾಮಿಡಿ ಕಿಲಾಡಿಗಳು’ ಮತ್ತು “ಸರಿಗಮಪ’ ಅಂತಹ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಾ ಬಂದಿದೆ. ಆ ಸಾಲಿಗೆ ಈಗ “ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ ಸೇರಿದೆ.