ಕಪಟ ನಾಟಕ ಪಾತ್ರಧಾರಿ: ಹುಲಿರಾಯ ಈಗ ಆಟೋ ಸಂಚಾರಿ!
Team Udayavani, Nov 6, 2019, 11:37 AM IST
ನಟ ಬಾಲು ನಾಗೇಂದ್ರ ಎಂಥಾ ಪ್ರತಿಭಾವಂತ ಎಂಬ ವಿಚಾರ ಗೊತ್ತಿಲ್ಲದಿರೋದೇನಲ್ಲ. ಕಡ್ಡಿಪುಡಿ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಲೇ ಪ್ರಸಿದ್ಧಿ ಪಡೆದುಕೊಂಡಿದ್ದ ಅವರು ಹುಲಿರಾಯ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಹೊಂದಿದ್ದರು. ಆ ಚಿತ್ರದಲ್ಲಿ ಬಾಲು ನಾಗೇಂದ್ರ ನಟಿಸಿದ ರೀತಿಯೇ ಕನ್ನಡ ಚಿತ್ರರಂಗದಲ್ಲಿ ಅವರಿಗೊಂದು ಖಾಯಂ ಸ್ಥಾನಮಾನವನ್ನು ಸೃಷ್ಟಿಸಿ ಬಿಟ್ಟಿತ್ತು. ಇಂಥಾ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಅವರ ಆ ನಂತರ ಒಪ್ಪಿಕೊಂಡಿದ್ದ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ. ಅದಾಗಲೇ ಈ ಚಿತ್ರದೆಡೆಗೆ ಅಗಾಧ ನಿರೀಕ್ಷೆಗಳು ಎತ್ತೆತ್ತಲೂ ಮೇಳೈಸಿಕೊಂಡಿವೆ.
ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಬಾಲು ನಾಗೇಂದ್ರ ಆಟೋ ಡ್ರೈವರ್ ಆಗಿ ನಟಿಸಿದ್ದಾರೆ. ಅದು ನಾನಾ ಚಹರೆಗಳನ್ನು ಹೊಂದಿರೋ ಪಾತ್ರ. ಕಾಲೂರಿ ನಿಂತು ಕೆಲಸ ಮಾಡೋ ಕಾನ್ಸೆಪ್ಟೆಂದರೆ ಅಲರ್ಜಿ ಎಂಬಂಥಾ ಹುಡುಗ ಆಟೋ ಓಡಿಸಿಕೊಂಡು ಬದುಕೋ ಅನಿವಾರ್ಯತೆ ಎದುರಾದಾಗ ಆತನ ದಿನಚರಿ ಹೇಗಿರುತ್ತದೆಂಬುದರ ಸುತ್ತಾ ಈ ಕಥೆ ಸಾಗುತ್ತದೆ. ಆತ ಈ ಹಾದಿಯಲ್ಲಿ ಯಾರ ಕಪಟ ನಾಟಕದಲ್ಲಿ ಪಾತ್ರಧಾರಿಯಾಗುತ್ತಾನೆ, ಅಲ್ಲಿ ಏನೇನೆಲ್ಲ ರೋಚಕ ವಿಚಾರಗಳು ಘಟಿಸುತ್ತವೆಂಬುದರ ಸಣ್ಣ ಝಲಕ್ ಈಗಾಗಲೇ ಟ್ರೇಲರ್ ಮೂಲಕ ಜಾಹೀರಾಗಿದೆ. ಅದು ಮೂಡಿ ಬಂದಿದ್ದ ರೀತಿಯೇ ಇಂದು ಎಲ್ಲರೂ ಕಪಟ ನಾಟಕ ಪಾತ್ರಧಾರಿಯನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುವಂತೆಯೂ ಮಾಡಿದೆ.
ಬಾಲು ನಾಗೇಂದ್ರ ಯಾವ ಪಾತ್ರವನ್ನೇ ಆದರೂ ನುಂಗಿಕೊಂಡು ನಟಿಸುವಂಥಾ ಅಗಾಧ ಪ್ರತಿಭೆ ಹೊಂದಿರುವವರು. ಇಲ್ಲಿಯೂ ಕೂಡಾ ಅದು ಮುಂದುವರೆದಿದೆ. ಸಂಗೀತಾ ಭಟ್ ಕೂಡಾ ನಾಯಕಿಯಾಗಿ ಬಾಲು ನಾಗೇಂದ್ರರಿಗೆ ಪೈಪೋಟಿ ಕೊಡುವಂತೆ ನಟಿಸಿದ್ದಾರಂತೆ. ಇನ್ನುಳಿದಂತೆ ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ಪರಮೇಶ್ ಛಾಯಾಗ್ರಹಣ, ಕಿರಣ್ ಚಂದ್ರ, ವೇಣು ಹಸ್ರಾಳಿ ಸಂಭಾಷಣೆ, ಕ್ರಿಶ್, ಚಾಣಕ್ಯ, ವೇಣು ಹಸ್ರಾಳಿ ಮತ್ತು ಅನಿರುದ್ಧ್ ಶಾಸ್ತ್ರೀ ಸಾಹಿತ್ಯವಿದೆ. ಈ ಚಿತ್ರ ಇದೇ ನವೆಂಬರ್ ಎಂಟರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.