ಕಾಯ್ಕಿಣಿ ಕಥೆಗೆ ಕಾಸರವಳ್ಳಿ ದೃಶ್ಯ ರೂಪ
Team Udayavani, Aug 31, 2019, 3:00 AM IST
ಸಾಹಿತಿ ಜಯಂತ ಕಾಯ್ಕಿಣಿ ಅವರ ಸಣ್ಣ ಕಥೆಯೊಂದು ಈಗ ಚಿತ್ರ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಜಯಂತ ಕಾಯ್ಕಿಣಿ ಅವರ “ಹಾಲಿನ ಮೀಸೆ’ ಎನ್ನುವ ಸಣ್ಣ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅದನ್ನು ಒಂದಷ್ಟು ಸಣ್ಣ ಬದಲಾವಣೆಗಳೊಂದಿಗೆ ದೃಶ್ಯ ರೂಪದಲ್ಲಿ ತೆರೆಗೆ ತರುತ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ “ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ’ ಎನ್ನುವ ಶೀರ್ಷಿಕೆ ಇಟ್ಟಿರುವ ಕಾಸರವಳ್ಳಿ, ಚಿತ್ರದ ಸ್ಕ್ರಿಪ್ಟ್ನ ಅಂತಿಮ ಹಂತದ ಕೆಲಸದಲ್ಲಿ ನಿರತವಾಗಿದ್ದಾರೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ, “ಸದ್ಯ ಕಾಯ್ಕಿಣಿ ಅವರ ಒಂದು ಮಕ್ಕಳ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಚಿತ್ರ ಮಾಡುವ ಯೋಚನೆ ಮಾಡಿದ್ದೇವೆ. ಮೂಲ ಕಥೆ ಬಾಂಬೆಯಲ್ಲಿ ನಡೆಯುತ್ತದೆ. ಅದನ್ನು ಇಲ್ಲಿನ ಪರಿಸರಕ್ಕೆ ತಕ್ಕಂತೆ ಕಥೆಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರಿನಲ್ಲಿ ನಡೆಯುವಂತೆ ಸ್ಕ್ರಿಪ್ಟ್ ಮಾಡಲಾಗುತ್ತಿದೆ.
ಸೆಪ್ಟೆಂಬರ್ ಮಧ್ಯಕ್ಕೆ ಚಿತ್ರ ಶುರುವಾಗುತ್ತದೆ. ಚಿತ್ರವನ್ನು ಶಿವಕುಮಾರ್ ನಿರ್ಮಿಸುತ್ತಿದ್ದು, ಹೆಚ್.ಎಂ ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸುವ ಆಲೋಚನೆ ಇದೆ’ ಎನ್ನುವ ಮಾಹಿತಿ ನೀಡುತ್ತಾರೆ.