ಕೋವಿಡ್ 19 ವೈರಸ್: ಸಿಎಂ ಪರಿಹಾರ ನಿಧಿಗೆ ದೀಪಿಕಾ 5 ಲಕ್ಷ ದೇಣಿಗೆ
ಹಾಗಂತ ಈ ಬಾರಿ ಯಾವುದೇ ರಿಯಾಲಿಟಿ ಶೋ ಮೂಲಕ ಅಲ್ಲ. ಬದಲಾಗಿ ದೇಣಿಗೆ ನೀಡುವ ಮೂಲಕ.
Team Udayavani, Apr 2, 2020, 10:34 AM IST
ಬೆಂಗಳೂರು:ದೀಪಿಕಾ ದಾಸ್ …ಇತ್ತೀಚೆಗೆ ಈ ಹೆಸರು ಹೆಚ್ಚಾಗಿ ಕೇಳಿಬಂದಿದ್ದು, ಬಿಗ್ ಬಾಸ್ ನಲ್ಲಿ ತನ್ನ ಸ್ಟೈಲ್ ಹಾಗೂ ಮ್ಯಾನರಿಸಂ ಮೂಲಕ ಸುದ್ದಿಯಾಗುತ್ತಿದ್ದ ದೀಪಿಕಾ ದಾಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹಾಗಂತ ಈ ಬಾರಿ ಯಾವುದೇ ರಿಯಾಲಿಟಿ ಶೋ ಮೂಲಕ ಅಲ್ಲ. ಬದಲಾಗಿ ದೇಣಿಗೆ ನೀಡುವ ಮೂಲಕ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೀಪಿಕಾ ದಾಸ್ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ಕೋವಿಡ್ ಸಂಕಷ್ಟದ ಪರಿಹಾರದಲ್ಲಿ ದೀಪಿಕಾ ದಾಸ್ ಭಾಗಿಯಾಗಿದ್ದಾರೆ.
ದೀಪಿಕಾ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರೂ, ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ನಾಗಿಣಿ ಧಾರಾವಾಹಿ. ಆ ಧಾರಾವಾಹಿಯಲ್ಲಿನ ದೀಪಿಕಾ ನಟನೆಯನ್ನು ಕಿರುತೆರೆ ಪ್ರೇಕ್ಷಕರು ಇಷ್ಟಪಟ್ಟರು. ನಾಗಿಣಿ ಬಳಿಕ ದೀಪಿಕಾ ಬಿಗ್ ಬಾಸ್ ಮನೆಗೆ ಹೋಗಿ, ಅಲ್ಲೂ ಮಿಂಚಿದರು. ಸದ್ಯ ದೀಪಿಕಾಗೆ ಸಿನಿಮಾದಿಂದ ಒಂದಷ್ಟು ಅವಕಾಶಗಳು ಬರುತ್ತಿದ್ದು, ಯಾವುದೇ ಸಿನಿಮಾವನ್ನು ದೀಪಿಕಾ ಒಪ್ಪಿಕೊಂಡಿಲ್ಲ.
ಮಂಗಳವಾರವಷ್ಟೇ ನಟ ಪುನೀತ್ ರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಈಗ ನಿಧಾನವಾಗಿ ಒಬ್ಬೊಬ್ಬರೇ ಸಿನಿಮಾ ಮಂದಿ ಕೋವಿಡ್ ಪರಿಹಾರದಲ್ಲಿ ಕೈ ಜೋಡಿಸಲು ಮುಂದಾಗುತ್ತಿದ್ದಾರೆ.