ಮನೋರಂಜನ್ “ಪ್ರಾರಂಭ’ ಮುಗಿಯಿತು
Team Udayavani, Aug 7, 2019, 3:01 AM IST
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಹೊಸಚಿತ್ರ “ಪ್ರಾರಂಭ’ದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು. “ಬೃಹಸ್ಪತಿ’ ಮತ್ತು “ಸಾಹೇಬ’ ಚಿತ್ರಗಳ ಬಳಿಕ “ಪ್ರಾರಂಭ’ ಮನೋರಂಜನ್ ಅಭಿನಯಿಸುತ್ತಿರುವ ಮೂರನೇ ಚಿತ್ರವಾಗಿದೆ. ಚಿತ್ರದಲ್ಲಿ ಮನೋರಂಜನ್ಗೆ ಕೀರ್ತಿ ಕಲಕೇರಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಮುಂತಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸುಮಾರು 50 ದಿನಗಳ ಕಾಲ ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಸುತ್ತಮುತ್ತ “ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ಪ್ರಾರಂಭ’ ಚಿತ್ರದಲ್ಲಿ ನಾಯಕ ಮನೋರಂಜನ್ ಮೂರು ಡಿಫರೆಂಟ್ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಕರ ಲೈಫ್ಸ್ಟೈಲ್, ಆಲೋಚನೆ ಎಲ್ಲವೂ “ಪ್ರಾರಂಭ’ ಚಿತ್ರದಲ್ಲಿದ್ದು, ಜೊತೆಗೆ ಒಂದು ಒಳ್ಳೆಯ ಸಂದೇಶ ಕೂಡ ಇದೆ ಎನ್ನುತ್ತದೆ ಚಿತ್ರತಂಡ. ಮನು ಕಲ್ಯಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು “ಜೇನುಶ್ರೀ ತನುಷ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಜಗದೀಶ್ ಕಲ್ಯಾಡಿ ನಿರ್ಮಿಸುತ್ತಿದ್ದಾರೆ.
ಉಳಿದಂತೆ “ಪ್ರಾರಂಭ’ ಚಿತ್ರದಲ್ಲಿ ಐದು ಹಾಡುಗಳಿದ್ದು, ಪ್ರಜ್ವಲ್ ಪೈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದಾರೆ. ಚಿತ್ರದ 2 ಸಾಹಸ ದೃಶ್ಯಗಳಿಗೆ ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಜಿ.ಎನ್ ಕುಮಾರ್ ಸಂಕಲನ ಕಾರ್ಯವಿದೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ “ಪ್ರಾರಂಭ’ ಚಿತ್ರ, ಇದೇ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.