ಮಾಸ್ಟರ್ ಆನಂದ್ ಈಗ “ಕೋಳಿಕ್ಕೇ ರಂಗ’
Team Udayavani, Sep 2, 2019, 3:00 AM IST
“ಬಿಗ್ಬಾಸ್’ ಮನೆಯಿಂದ ಹೊರಬಂದ ಮಾಸ್ಟರ್ ಆನಂದ್ ಸಾಕಷ್ಟು ಬಿಝಿಯಾಗಿದ್ದು ಗೊತ್ತೇ ಇದೆ. ಹಲವು ರಿಯಾಲಿಟಿ ಶೋ ಸೇರಿದಂತೆ ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ಅದರ ಜೊತೆ ಜೊತೆಯಲ್ಲೇ ಅವರು ಸದ್ದಿಲ್ಲದೆಯೇ, ಹೊಸಬರ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಹೌದು, ಮಾಸ್ಟರ್ ಆನಂದ್ “ನಾ ಕೋಳಿಕ್ಕೇ ರಂಗ’ ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ. ಎಸ್.ಟಿ.ಸೋಮಶೇಖರ್ ನಿರ್ಮಾಣದ ಈ ಚಿತ್ರವನ್ನು ಗೊರವಾಲೆ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ.
ಕಥೆ, ಚಿತ್ರಕಥೆ ಸಂಭಾಷಣೆಯ ಜವಾಬ್ದಾರಿಯೂ ಇವರದೇ. ನಿರ್ದೇಶಕ ಗೊರವಾಲೆ ಮಹೇಶ್, ಈ ಹಿಂದೆ ಹಿರಿಯ ನಿರ್ದೇಶಕರಾದ ದ್ವಾರಕೀಶ್, ದ್ವಾರ್ಕಿ, ಬೂದಾಳ್ ಕೃಷ್ಣಮೂರ್ತಿ, ಕೆ.ಪ್ರಸಾದ್ ಅವರ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಕುರಿತು ತರಬೇತಿಯನ್ನು ಪಡೆದಿದ್ದಾರೆ. ಆ ಅನುಭವದ ಮೇಲೆ ಚೊಚ್ಚಲ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರಕ್ಕೆ ರಾಜು ಎಮ್ಮಿಗಾನೂರು ಸಂಗೀತ ನೀಡಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ.
“ಒಳಿತು ಮಾಡು ಮನುಸ” ಹಾಡು ಬರೆದಿದ್ದ ನಮ್ಋಷಿ ಅವರು ಗೀತೆ ರಚಿಸಿದ್ದಾರೆ. ಅವರೊಂದಿಗೆ ಹನಸೊಗೆ ಸೋಮಶೇಖರ್ ಕೂಡ ಗೀತೆ ರಚಿಸಿದ್ದಾರೆ. ಧನುಷ್ ಛಾಯಾಗ್ರಹಣವಿದೆ. ವಿಶ್ವ ಸಂಕಲನ ಮಾಡಿದರೆ, ಅಶೋಕ್ ಸಾಹಸ ನಿರ್ದೇಶನವಿದೆ. ಹೈಟ್ ಮಂಜು, ಮನು ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಆನಂದ್ ಅವರಿಗೆ ನಾಯಕಿಯಾಗಿ ರಾಜೇಶ್ವರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭವ್ಯಾ, ಹೊನ್ನವಳ್ಳಿ ಕೃಷ್ಣ, ಶಕಿಲಾ, ಬಿರಾದಾರ್, ಗುರುರಾಜ್ ಹೊಸಕೋಟೆ, ರಾಕ್ಲೈನ್ ಸುಧಾಕರ್, ಗಡ್ಡಪ್ಪ ಇತರರು ನಟಿಸಿದ್ದಾರೆ.