“ಪ್ರಾರಂಭ’ಕ್ಕೆ ಮುಹೂರ್ತ
Team Udayavani, Jan 14, 2019, 6:17 AM IST
ಮನೋರಂಜನ್ ರವಿಚಂದ್ರನ್ “ಪ್ರಾರಂಭ’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆದರೆ, ಆ ಚಿತ್ರ ಯಾವಾಗ ಶುರುವಾಗುತ್ತೆ ಎಂಬ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಹಿಂದೆ ಒಂದಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಮನು ಕಲ್ಯಾಡಿ ಈ ಚಿತ್ರದ ನಿರ್ದೇಶಕರು. ಇದು ಅವರ ಮೊದಲ ನಿರ್ದೇಶನದ ಚಿತ್ರ.
ಇನ್ನು, ಅವರ ಸಹೋದರ ಜಗದೀಶ್ ಕಲ್ಯಾಡಿ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದೊಂದು ಪಕ್ಕಾ ಲವ್ಸ್ಟೋರಿ ಚಿತ್ರ. ಆದರೂ, ಈಗಿನ ಟ್ರೆಂಡ್ಗೆ ತಕ್ಕಂತೆ ಇರುವ ಕಥೆ ಹೆಣೆದು, ವಿಭಿನ್ನ ನಿರೂಪಣೆಯೊಂದಿಗೆ “ಪ್ರಾರಂಭಿ’ಸುತ್ತಿರುವುದಾಗಿ ಹೇಳುತ್ತಾರೆ ಮನು. “ಮನೋರಂಜನ್ ಅವರಿಲ್ಲಿ ಹೊಸ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಕಷ್ಟು ಹೊಸತನ ಚಿತ್ರದಲ್ಲಿದೆ. ಎರಡು ಭರ್ಜರಿ ಫೈಟ್ಸ್ಗಳಿದ್ದು, ಸಂಭಾಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ.
ಮಾತುಗಳಲ್ಲಿ ಫೊರ್ಸ್ ಇರಲಿದ್ದು, ಮಾಸ್ ಮತ್ತು ಕ್ಲಾಸ್ ಜನರಿಗೆ ಇಷ್ಟವಾಗುವಂತಹ ಮಾತುಗಳನ್ನು ಪೋಣಿಸಲಾಗಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಮನೋರಂಜನ್ ಅವರಿಗೆ ಕೀರ್ತಿ ಎಂಬ ಹೊಸ ಹುಡುಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಹುಬ್ಬಳ್ಳಿ ಹುಡುಗಿಯಾಗಿರುವ ಕೀರ್ತಿ ಅವರಿಗೂ ಇದು ಮೊದಲ ಚಿತ್ರ. ಸುಮಾರು 55 ದಿನಗಳ ಕಾಲ ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಹಾಗು ಬಳ್ಳಾರಿ ಸೇರಿದಂತೆ ಇತರೆ ಕಡೆ ಚಿತ್ರೀಕರಣ ನಡೆಸುವ ಯೋಚನೆ ಇದೆ’ ಎಂದು ವಿವರ ಕೊಡುತ್ತಾರೆ ಮನು ಕಲ್ಯಾಡಿ.
ಚಿತ್ರದಲ್ಲಿ ಶ್ರೀನಿವಾಸಪ್ರಭು, ಕಡ್ಡಿಪುಡಿ ಚಂದ್ರ ಸೇರಿದಂತೆ ದೊಡ್ಡ ಕಲಾವಿದರ ದಂಡು ಕಾಣಿಸಿಕೊಳ್ಳಲಿದೆ. ಈ ಹಿಂದೆ “ಉಪ್ಪು ಹುಳಿ ಖಾರ’ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರಜ್ವಲ್ ಪೈ ಅವರು ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದು, ನಾಲ್ಕು ಹಾಡುಗಳಿಗೆ ಸಂತೋಷ್ ನಾಯಕ್ ಅವರು ಗೀತೆ ರಚಿಸುತ್ತಿದ್ದಾರೆ. ಸುರೇಶ್ ಬಾಬು ಅವರ ಛಾಯಾಗ್ರಹಣವಿದೆ. ವಿಜಯ್ ಎಂ.ಕುಮಾರ್ ಸಂಕಲನ, ರವಿ ಸಂತೆಹೈಕ್ಲು ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ ಮನೋರಂಜನ್ ಹುಟ್ಟುಹಬ್ಬದಂದು “ಪ್ರಾರಂಭ’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.