ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ
Team Udayavani, Jun 21, 2018, 6:00 AM IST
ಬೆಂಗಳೂರು: ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಈ ಹಿಂದೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ರಾಜೇಂದ್ರಸಿಂಗ್ ಬಾಬು ಅವರು ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರ ಬದಲಾಗಿದ್ದರಿಂದ ಅವರ ಹುದ್ದೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಾಗತಿಹಳ್ಳಿ ಚಂದ್ರಶೇಖರ್ ಅವರು “ಉಂಡು ಹೋದ ಕೊಂಡು ಹೋದ’ ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಮೊದಲ ಚಿತ್ರ ನಿರ್ದೇಶನಕ್ಕೇ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಇದಕ್ಕೂ ಮುನ್ನ “ಕಾಡಿನ ಬೆಂಕಿ’, “ಪ್ರಥಮ ಉಷಾಕಿರಣ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದರು.
ನಾಗತಿಹಳ್ಳಿ ಚಂದ್ರಶೇಖರ್ ಅವರ ಮೊದಲ ನಿರ್ದೇಶನದ “ಉಂಡು ಹೋದ ಕೊಂಡು ಹೋದ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸಬಗೆಯ ಚಿತ್ರವಾಗಿ ಹೊರಹೊಮ್ಮಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರು ಹಲವು ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. “ಬಾ ನಲ್ಲೆ ಮಧುಚಂದ್ರಕೆ’, “ಕೊಟ್ರೇಶಿ ಕನಸು’, “ಅಮೆರಿಕ ಅಮೆರಿಕ’, “ಹೂ ಮಳೆ’, “ನನ್ನ ಪ್ರೀತಿಯ ಹುಡುಗಿ’, “ಸೂಪರ್ ಸ್ಟಾರ್’, “ಪ್ಯಾರಿಸ್ ಪ್ರಣಯ’,
“ಅಮೃತಧಾರೆ’, “ಮಾತಾಡ್ ಮಾತಾಡು ಮಲ್ಲಿಗೆ’, “ಒಲವೇ ಜೀವನ ಲೆಕ್ಕಾಚಾರ’, “ಬ್ರೇಕಿಂಗ್ ನ್ಯೂಸ್’ ಮತ್ತು “ಇಷ್ಟಕಾಮ್ಯ’ ಸೇರಿದಂತೆ ಇನ್ನೂ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಈ ಪೈಕಿ “ಕೊಟ್ರೇಶಿ ಕನಸು’, “ಅಮೆರಿಕ ಅಮೆರಿಕ’ ಮತ್ತು “ಹೂ ಮಳೆ’ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ತಮ್ಮ ನಿರ್ದೇಶನದ ಹಲವು ಚಿತ್ರಗಳಿಗೆ ಪ್ರಶಸ್ತಿ ಪಡೆದಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಳೆದ ಮೂರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ನಿರಂತರ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, “ರಾಜ್ಯ ಸರ್ಕಾರ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅಕಾಡೆಮಿ ಮೂಲಕ ಕನ್ನಡ ಚಿತ್ರರಂಗದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿದ್ದಾರೆ.