ಹೊಸಬರು “ಅಂದುಕೊಂಡಂತೆ’ ಆಗಲಿ ..
Team Udayavani, Oct 17, 2019, 3:00 AM IST
ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಅಂದುಕೊಂಡಂತೆ’ ಚಿತ್ರತಂಡವೂ ಸೇರಿದೆ. ಶೀರ್ಷಿಕೆಯ ಮೂಲಕವೇ ಒಂದಷ್ಟು ಗಮನಸೆಳೆದಿರುವ ಇದನ್ನು ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಶ್ರೇಯಸ್ ನಿರ್ದೇಶಕನ ಪಟ್ಟ ಅಲಂಕರಿಸಿದರೆ, ವಿಶ್ರುತ್ ಮತ್ತು ರಿಶ್ವಿ ಭಟ್ ನಾಯಕ, ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾಯಕ ವಿಶ್ರುತ್ ಅವರು “ಒರಟ’ ಪ್ರಶಾಂತ್ ಅವರ ಸಹೋದರ ಎಂಬುದು ವಿಶೇಷ. ಇನ್ನು, ನಿರ್ದೇಶಕರು ಈ ಹಿಂದೆ ರಾಮಮೂರ್ತಿ ಹಾಗು ಶರಣ್ ಕಬ್ಬೂರು ಅವರ ಬಳಿ ಕೆಲಸ ಮಾಡಿದ್ದರು. ಆ ಅನುಭವದಿಂದ ಈಗ “ಅಂದುಕೊಂಡಂತೆ’ ಚಿತ್ರ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಶ್ರೇಯಸ್, ಚಿತ್ರಮಂದಿರಕ್ಕೆ ಬರಲು ತಯಾರಿ ನಡೆಸಿದ್ದಾರೆ.
ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ ಇದ್ದು, ಇಷ್ಟರಲ್ಲೇ ಪ್ರಮಾಣ ಪತ್ರ ಪಡೆಯುವ ಉತ್ಸಾಹ ಅವರದ್ದು. ಎಲ್ಲಾ ಅಂದುಕೊಂಡಂತೆ ನಡೆದರೆ, ನವೆಂಬರ್ ವೇಳೆಗೆ ಚಿತ್ರಮಂದಿರಕ್ಕೆ “ಅಂದುಕೊಂಡಂತೆ’ ಬರಲಿದೆ. ಇನ್ನು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುವ ನಿರ್ದೇಶಕ ಶ್ರೇಯಸ್, ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿದ್ದಾರೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಿಸಿದ್ದು,
ಚಿತ್ರದಲ್ಲಿ ಪ್ರಮೋದ್, ಅಶ್ವಿತಾ, ಲೋಹಿತ್, ಲೋಕೇಶ್ ಮತ್ತು ಕಿರಣ್ ಇತರರು ನಟಿಸಿದ್ದಾರೆ ಎಂದು ವಿವರಿಸುತ್ತಾರೆ. ಚಿತ್ರಕ್ಕೆ ಅನಂತ್ ಕಾಮತ್ ಸಂಗೀತ ನೀಡಿದ್ದಾರೆ. ಈ ಹಿಂದೆ ಇವರು ಚರಣ್ರಾಜ್ ಬಳಿ ಕೆಲಸ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರ. ರಮೇಶ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ನಿರ್ದೇಶಕ ಶ್ರೇಯಸ್ ಹಾಗು ಛಾಯಾಗ್ರಾಹಕ ರಮೇಶ್ ವಹಿಸಿಕೊಂಡಿದ್ದಾರೆ.