ಮತ್ತೆ ಸಿನಿ ಅಖಾಡಕ್ಕೆ ನಿಖಿಲ್
ಕೃಷ್ಣ ನಿರ್ದೇಶನದಲ್ಲಿ ಹೊಸ ಚಿತ್ರ- ಜನವರಿಯಿಂದ ಶುರು
Team Udayavani, Oct 1, 2019, 3:04 AM IST
ನಿಖಿಲ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ವಾಪಾಸ್ಸಾಗಿದ್ದಾರೆ. ಅದು ಹೊಸ ಸಿನಿಮಾ ಮೂಲಕ. “ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಿಖಿಲ್, ಆ ನಂತರ “ಸೀತಾರಾಮ ಕಲ್ಯಾಣ’, “ಕುರುಕ್ಷೇತ್ರ’ ಚಿತ್ರಗಳಲ್ಲಿ ನಟಿಸಿರೋದು ನಿಮಗೆ ಗೊತ್ತೆ ಇದೆ. ಈ ನಡುವೆಯೇ ಅವರು ರಾಜಕೀಯಕ್ಕೆ ಎಂಟ್ರಿಕೊಟ್ಟು, ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಚಿತ್ರರಂಗದಿಂದ ದೂರವಿದ್ದರು.
ಹಾಗಾಗಿ, ನಿಖಿಲ್ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಾರೋ ಅಥವಾ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೋ ಎಂಬ ಪ್ರಶ್ನೆ ಇತ್ತು. ಈಗ ನಿಖಿಲ್ ಹೊಸ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಈ ಬಾರಿ ನಿಖಿಲ್ ಸಿನಿಮಾವನ್ನು ನಿರ್ದೇಶಿಸುತ್ತಿರೋದು ಕೃಷ್ಣ. ಸುದೀಪ್ ಅವರ “ಹೆಬ್ಬುಲಿ’ ಹಾಗೂ ಸದ್ಯ ಪ್ರದರ್ಶನ ಕಾಣುತ್ತಿರುವ “ಪೈಲ್ವಾನ್’ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಅವರು ನಿಖಿಲ್ ನಾಯಕರಾಗಿರುವ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಚಿತ್ರದ ಮೂಲಕ ಲೈಕಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಬರುತ್ತಿದೆ. ರಜನಿಕಾಂತ್ ನಾಯಕರಾಗಿದ್ದ “2.0′ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಿಸಿತ್ತು. ಈಗ ನಿಖಿಲ್ ಕುಮಾರ್ ಚಿತ್ರವನ್ನು ನಿರ್ಮಿಸಲು ಮುಂದೆ ಬಂದಿದೆ. ಹೊಸ ಚಿತ್ರದ ಟೈಟಲ್, ತಾರಾಗಣ, ತಾಂತ್ರಿಕ ವರ್ಗ ಸೇರಿದಂತೆ ಯಾವ ಅಂಶವೂ ಅಂತಿಮವಾಗಿಲ್ಲ. ಚಿತ್ರ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ತಯಾರಾಗುವ ಸಾಧ್ಯತೆ ಇದೆ. ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ. ಇನ್ನು, ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದಲ್ಲಿ ನಿಖಿಲ್, ಅಭಿಮನ್ಯು ಪಾತ್ರ ಮಾಡಿದ್ದಾರೆ.