ಹೊಸಬರಿಗೆ ನಿಖಿಲ್ ಸಾಥ್
Team Udayavani, Jul 24, 2020, 11:51 AM IST
ಹಂಬಲ್ ಪೊಲಿಟಿಷಿಯನ್ ನೋಗ್ರಾಜ್ ನಿರ್ದೇಶಕನ ಚಿತ್ರ ನಿರ್ಮಾಣ ಹಂಬಲ್ ಪೊಲಿಟಿಷಿಯನ್ ನೋಗ್ರಾಜ್ ಎಂಬ ಸಿನಿಮಾ ಬಂದಿರೋದು ನಿಮಗೆ ಗೊತ್ತೇ ಇದೆ. ಕಾಮಿಡಿ ಹಿನ್ನೆಲೆಯಲ್ಲಿ ಬಂದ ಈ ಸಿನಿಮಾ ಹಿಟ್ಲಿಸ್ಟ್ ಸೇರಿತ್ತು. ಈ ಚಿತ್ರವನ್ನು ನಿರ್ದೇಶಿಸಿದ್ದು, ಸಾದ್ ಖಾನ್. ಈಗ ಸಾದ್ ಖಾನ್ ಮತ್ತೆ ಹೊಸಬರ ಜೊತೆ ಬಂದಿದ್ದಾರೆ. ಸಂಗೀತ್ ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಸಂಪೂರ್ಣ ಹೊಸಬರೇ ಇರುವ ಈ ಸಿನಿಮಾಕ್ಕೆ ಪ್ರಮುಖ ನಿರ್ಮಾಣ ಸಂಸ್ಥೆಯೊಂದು ಕೈ ಜೋಡಿಸಿದೆ. ಅದು ನಿಖಿಲ್ ಕುಮಾರ್ ಅವರದು. ಹೌದು, ನಿಖೀಲ್ ಹೊಸಬರ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. ಈ ಬಾರಿ ನಟರಾಗಿ ಅಲ್ಲ, ನಿರ್ಮಾಪಕರಾಗಿ. ಈ ಚಿತ್ರವನ್ನು ನಿಖಿಲ್ ಹಾಗೂ ಅವರ ಗೆಳೆಯ ಚಂದ್ರು ಮನೋಹರ್ ಸೇರಿ ನಿರ್ಮಿಸುತ್ತಿದ್ದಾರೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮಾಡುವ ನಿಖೀಲ್ ಈ ಬಾರಿ ಹೊಸಬರ ಸಿನಿಮಾ ನಿರ್ಮಾಣಕ್ಕೆ ಸಾಥ್ ನೀಡಲು ಕಾರಣ, ಕಥೆ.
ಚಿತ್ರದ ಕತೆ ಹೊಸ ತನದಲ್ಲಿರುವುದರಿಂದ ನಿಖಿಲ್ ಈ ಚಿತ್ರ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ. ಈ ಚಿತ್ರದಲ್ಲಿ ನಿಖೀಲ್ ನಟಿಸುತ್ತಿಲ್ಲ. ಬದಲಾಗಿ ನಿರ್ಮಾಣದಲ್ಲಷ್ಟೇ ಭಾಗಿಯಾಗಲಿದ್ದಾರೆ. ಸದ್ಯ ನಿಖಿಲ್ ಕೃಷಿಯತ್ತ ಆಸಕ್ತಿ ತೋರಿದ್ದಾರೆ. ತಮ್ಮ ಪತ್ನಿ ಜೊತೆ ತೋಟದ ಮನೆಯಲ್ಲಿರುವ ನಿಖಿಲ್, ಕೃಷಿ ಮಾಡುತ್ತಾ, ಜೊತೆಗೆ ಕೃಷಿಯತ್ತ ಆಸಕ್ತಿ ತೋರಿರುವ ಯುವ ಜನರಿಗೆ ಪ್ರೋತ್ಸಾಹ ಕೂಡಾ ನೀಡುತ್ತಿದ್ದಾರೆ. ಇದಲ್ಲದೇ ನಿಖಿಲ್ ಕೈಯಲ್ಲೂ ಮೂರ್ನಾಲ್ಕು ಸಿನಿಮಾಗಳಿದ್ದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಚಿತ್ರೀಕರಣ ಆರಂಭವಾಗಲಿದೆ. ಈಗಾಗಲೇ ನಿಖಿಲ್ ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಚಿತ್ರಗಳಲ್ಲಿನ ನಿಖಿಲ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.