ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ
Team Udayavani, Jul 7, 2022, 4:03 PM IST
ನಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ನಾಯಕರಾಗಿ ನಟಿಸಿರುವ “ನಮ್ಮ ಹುಡುಗರು’ ಚಿತ್ರ ಈ ವಾರ ತೆರೆಕಾಣುತ್ತಿದ. ಈ ಚಿತ್ರವನ್ನು ಹೆಚ್.ಬಿ.ಸಿದ್ದು ನಿರ್ದೇಶಿಸಿದ್ದಾರೆ.
ಬಿಡುಗಡೆ ತಯಾರಿ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಿದ್ದು, “ಇದೇ ಶುಕ್ರವಾರ ನಮ್ಮ ಚಿತ್ರ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಂದು ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಡ್ಯದ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದು. ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಮಿಥ್ಯ. ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಿದ್ದೇವೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಕೊನೆಯಾಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಿದ್ದೇವೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಿದ್ದೇವೆ’ ಎಂದರು
ನಾಯಕ ನಿರಂಜನ್ ಅವರಿಗೆ ಹೀರೋ ಆಗಿ ಇದು ಮೊದಲ ಸಿನಿಮಾ. ಸಹಜವಾಗಿಯೇ ಎಕ್ಸೆ„ಟ್ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರಂಜನ್, “ನಾರ್ಮಲ್ ಸಿನಿಮಾ ಇದಲ್ಲ. ಒಂದೊಳ್ಳೆಯ ಕಂಟೆಂಟ್ ಇದೆ. ರಿಯಲ್ ಲೈಫ್ನಲ್ಲಿ ಎಲ್ಲರಿಗೂ ಭಾವನಾತ್ಮಕವಾಗಿ ಚಿತ್ರ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಹಾಡುಗಳು ಹೈಲೈಟ್ಸ್. ಚಿತ್ರದ ದೃಶ್ಯವೊಂದನ್ನು ಬೆಟ್ಟದ ಮೇಲೆ ಶೂಟ್ ಮಾಡಿದ್ದೇವೆ. ಸಖತ್ ಎತ್ತರದಲ್ಲಿ ಮಾಡಿದ ಸೀನ್ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್, ಪ್ರವೀಣ್ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್ ಆಗುತ್ತದೆ’ ಎಂದರು.
ರಾಧ್ಯಾ ಈ ಚಿತ್ರದ ನಾಯಕಿ. “ನಾನಿಲ್ಲಿ ಗೌರಿ ಎಂಬ ಮಂಡ್ಯ ಹುಡುಗಿಯಾಗಿ ನಟಿಸಿದ್ದು, ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರ’ ಎಂದರು.
“ಗೋಲ್ಡನ್ ಹಾರ್ಟ್ಸ್’ ಮೂಲಕ ಕೆ.ಕೆ. ಅಶ್ರಫ್ ಅವರ ನಿರ್ಮಾಣ ಮಾಡಿದ್ದು, ಈ ಚಿತ್ರವನ್ನು “ಜಯಣ್ಣ ಫಿಲಂಸ್’ ಬಿಡುಗಡೆ ಮಾಡುತ್ತಿದೆ.