ಸೂರ್ಯವಂಶ ಧಾರಾವಾಹಿಗೆ ವಿರೋಧ; ಅನಿರುದ್ಧ್ ನಟಿಸಲೇಬಾರದು!
ನಿರ್ದೇಶಕ ಎಸ್. ನಾರಾಯಣ್ ಅವರ ಬಹು ನಿರೀಕ್ಷಿತ ಧಾರಾವಾಹಿಗೆ ಆಕ್ಷೇಪ
Team Udayavani, Dec 9, 2022, 7:28 PM IST
ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಎಸ್. ನಾರಾಯಣ್ ಅವರು ನಿರ್ದೇಶಿಸುತ್ತಿರುವ ಸೂರ್ಯವಂಶ ಧಾರಾವಾಹಿ ಕುರಿತು ಘೋಷಣೆಯಾಗುತ್ತಿದ್ದಂತೆ ಪ್ರಮುಖ ಪಾತ್ರಧಾರಿ ಅನಿರುದ್ಧ್ ಅವರು ನಟಿಸಬಾರದು ಎಂದು ಆಕ್ಷೇಪ ವ್ಯಕ್ತವಾಗಿದೆ.
ಧಾರಾವಾಹಿಯನ್ನು ನಿಲ್ಲಿಸಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದು, ಅನಿರುದ್ಧ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧವಿರುವ ಕಾರಣ ಅವರ ನಟನೆಯಲ್ಲಿ ಚಿತ್ರೀಕರಣ ಮಾಡದಂತೆ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ಕೂಡ ಮಾಡಲಾಗಿದ್ದು, ಅನಿರುದ್ಧ್, ವಾಣಿಜ್ಯ ಮಂಡಳಿಯ ಭಾಮಾ ಹರೀಶ್, ಸುಂದರ್ ರಾಜು ಸೇರಿ ಹಲವರು ಈ ಕುರಿತಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.
”ನಾನು ಫಿಲ್ಮ್ ಚೇಂಬರ್ ಗೆ ಅವರೆಲ್ಲರೂ ಬರುತ್ತಾರೆಂಬ ನಿರೀಕ್ಷೆಯಲ್ಲಿದ್ದೆ.ಆದರೆ ಇವತ್ತು ಯಾರೂ ಬರಲಿಲ್ಲ. ಬೇರೆ ಧಾರವಾಹಿಯಲ್ಲಿ ನಾನು ನಟನೆ ಮಾಡಬಾರದು ಎಂದು ಒತ್ತಡ ಹೇರುತ್ತಿದ್ದಾರೆ. ಎಸ್. ನಾರಾಯಣ್ ಅವರ ಬಳಿ ಬಂದು ಧಾರವಾಹಿಯಲ್ಲಿ ಅವಕಾಶ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ಕೋರ್ಟ್ ಮೊರೆ ಹೋಗಬಹುದು. ಆದರೆ ನಾವೆಲ್ಲಾ ‘ವಸುದೈವ ಕುಟುಂಬಕಂ’ ಒಂದೇ ಕುಟುಂಬದವರು ಅನ್ನುವ ಭಾವನೆ ಇದೆ. ನಾರಾಯಣ್ ಸರ್ ಅವರು ಧಾರವಾಹಿ ಮುಂದುವರಿಸೋಣ ಎಂದಿದ್ದಾರೆ. ಅವರು ಅಪ್ಪಾಜಿಗೆ (ಡಾ. ವಿಷ್ಣು ವರ್ಧನ್) ಕಥೆ ಹೇಳುತ್ತಿದ್ದರು. ಈಗ ನನಗೆ.. ನನ್ನ ಅದೃಷ್ಠ, ನಾನು ಧಾರವಾಹಿ ಮಾಡಿಯೇ ಮಾಡುತ್ತೇನೆ” ಎಂದು ಅನಿರುದ್ಧ್ ಹೇಳಿದ್ದಾರೆ.
ಜನಪ್ರಿಯ ಟಿವಿ ಧಾರವಾಹಿ ”ಜೊತೆ ಜೊತೆಯಲಿ” ತಂಡ ಪ್ರಮುಖ ಪಾತ್ರಧಾರಿಯಾಗಿದ್ದ ಅನಿರುದ್ಧ್ ಜತ್ಕರ್ ಅವರನ್ನು ತಂಡದಿಂದ ಹೊರ ಹಾಕಿದ ಬಳಿಕ ಕಿರುತೆರೆಯಿಂದ 2 ವರ್ಷ ಬ್ಯಾನ್ ಮಾಡಲಾಗಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ಅನಿರುದ್ಧ ವಿರುದ್ಧ ವಿರುದ್ಧ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.