ಪದ್ಮಾವತಿಗೆ ಗಂಗಮ್ಮ ಹಾಡು
Team Udayavani, Aug 1, 2018, 6:20 PM IST
“ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ’ ಎಂಬ ಸಿನಿಮಾ ಮಾಡಿದ ವಿಕ್ರಂ ಆರ್ಯ ಈಗ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದು “ಪದ್ಮಾವತಿ’. ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಕೊಪ್ಪಳದ ಗಂಗಮ್ಮ ಮೂರು ಹಾಡುಗಳಿಗೆ ದನಿಯಾಗಿದ್ದಾರೆ. ಒಂದು ಹೆಣ್ಣು ಗರ್ಭವತಿಯಾದ ಸಂರ್ಭದಲ್ಲಿ ಆಕೆಗೆ ಸೀಮಂತ ಮಾಡುವ ಸನ್ನಿವೇಶದಲ್ಲಿ ಬರುವಂತಹ ಹಾಡನ್ನು ಗಂಗಮ್ಮ ಅವರು ಕಳೆದ ಮಂಗಳವಾರ ಬೆಂಗಳೂರಿನ ವಿಜಯ್ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಹಾಡಿದರು.
“ಹಚ್ಚಿರೆ ಹರಿಶಿನವ, ಪೂಸೀರೇ ಗಂಧವಾ …’ ಹಾಗೂ “ಕುಹೂ ಕುಹೂ ಕೋಗಿಲೆ ಒಮ್ಮೆ ಕೂಗಬಾರದೇ …’ ಎಂಬ ಎರಡು ಹಾಡುಗಳನ್ನು ಗಂಗಮ್ಮ ಅವರ ಕಂಠ ಸಿರಿಯಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ಚಿತ್ರದ ಕಥೆಗೆ ಅನುಗುಣವಾಗಿ ಅಪ್ಪಟ ಗ್ರಾಮೀಣ ಕಂಠದ ಅವಶ್ಯಕತೆ ಇದ್ದುದ್ದರಿಂದ ಗಂಗಮ್ಮ ಅವರಲ್ಲಿ ಹಾಡಿಸಿದ್ದಾರೆ. ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಒಟ್ಟು 8 ಹಾಡುಗಳು ಈ ಚಿತ್ರದಲ್ಲಿದ್ದು ಪ್ರೇಮ್ ಸಾಯಿ, ಹರೀಶ್ ಜಿ ರಾವ್ ಸಾಹಿತ್ಯ ಬರೆದಿದ್ದಾರೆ. ಕಿರುತೆರೆಯ ಅನುಭವವಿರುವ ಮಿಥುನ್ ಚಂದ್ರಶೇಖರ್ ಈ ಚಿತ್ರದ ನಿರ್ದೇಶಕರು.
ರಾವ್ ಅಂಡ್ ರಾವ್ ಸಿನಿಮಾಸ್ ಮೂಲಕ ದಾಮೋದರ್ ರಾವ್ ಹಾಗೂ ನಾಮದೇವ ಭಟ್ಟರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶೋಹೆಬ್ ಅಹಮದ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು ಶಿವಮೊಗ್ಗ ಹೊಸನಗರ ಹಾಗೂ ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರಿಕರಣ ನಡೆಸಲಾಗಿದೆ. ವಿಕ್ರಂ ಆರ್ಯಾ, ಸಾಕ್ಷಿ ಮೇಘನ, ದಾಮೋದರ್ ರಾವ್, ರಾಘವ ಕಲಾಲ್, ಕೀರ್ತಿ ಎನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.