ದರ್ಶನ್ ಫಾರ್ಮ್ ಹೌಸ್ ಗೆ ಹೊಸ ಅತಿಥಿಯಾಗಿ ಬಂದ ಗಿಣಿರಾಮ
Team Udayavani, May 12, 2021, 7:35 AM IST
ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳನ್ನು ಸಾಕೋದ್ರಲ್ಲಿ ಯಾವತ್ತೂ ಮುಂದೆ ಇರ್ತಾರೆ. ತಮ್ಮ ಮೈಸೂರಿನ ತೋಟದ ಮನೆಯಲ್ಲಿ ನಾನಾ ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಕುದುರೆ, ಹಸು ಇರುವ ಅವರ ಫಾರಂ ಹೌಸ್ ಗೆ ಇದೀಗ ಹೊಸ ಅತಿಥಿಯೊಂದು ಸೇರ್ಪಡೆಯಾಗಿದೆ. ದರ್ಶನ್ ಇತ್ತೀಚೆಗೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಶ್ರಮದಲ್ಲಿರುವ ಗಿಣಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.
ಇದೇ ವೇಳೆ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದ ದರ್ಶನ್ ಗೆ ಶ್ರೀಗಳು ಆಶ್ರಮದ ಗಿಣಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ರಾಜವರ್ಧನ್ ಕೂಡ ದರ್ಶನ್ ಜೊತೆಯಲ್ಲಿದ್ದರು. ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದ ಗಿಣಿಯನ್ನು ದರ್ಶನ್ ಗೌರವದಿಂದ ಸ್ವಾಮಿಗಳಿಂದ ಸ್ವೀಕರಿಸಿದ್ದಾರೆ. ದರ್ಶನ್ ಫಾರ್ಮ್ ಹೌಸ್ ನಲ್ಲಿ ಕುದುರೆಗಳು, ಹಸು, ಎತ್ತುಗಳು, ಕುರಿ, ಪಾರಿವಾಳ ಸೇರಿ ಹಲವು ಪ್ರಾಣಿ-ಪಕ್ಷಿಗಳಿವೆ.
ನಟ ದರ್ಶನ್ ಆಗಾಗ ವನ್ಯಜೀವಿಗಳ ಫೋಟೊಗ್ರಫಿಯಲ್ಲಿಯೂ ತೊಡಗುತ್ತಾರೆ. ಗೆಳೆಯರ ಜೊತೆ ಅರಣ್ಯಕ್ಕೆ ಸಫಾರಿ ತೆರಳುವ ದರ್ಶನ್ ಪ್ರಾಣಿಗಳ ಛಾಯಾಚಿತ್ರ ತೆಗೆದು ಅದನ್ನು ಮಾರಿ ಬಂದ ಹಣವನ್ನು ವನ್ಯಜೀವಿಗಳಿಗೆ ಬಳಸಲು ದೇಣಿಗೆಯಾಗಿ ನೀಡುತ್ತಾರೆ.