ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ
Team Udayavani, Sep 16, 2021, 3:03 PM IST
ಪ್ರೀತಿ, ಪ್ರೇಮದ ವಿಷಯವನ್ನು ಇಟ್ಟುಕೊಂಡು ನೂರಾರು ಸಿನಿಮಾಗಳು ಬಂದಿರುವುದು ನಿಮಗೆ ಗೊತ್ತೇ ಇದೆ. ಈಗ ಇಲ್ಲೊಂದು ಚಿತ್ರತಂಡ ತಮ್ಮ ಚಿತ್ರದ ಮೂಲಕ ಪ್ರೀತಿ, ಪ್ರೇಮಕ್ಕೆ ಮತ್ತೊಂದು ಹೊಸ ಅರ್ಥ, ವ್ಯಾಖ್ಯಾನ ನೀಡಲು ಹೊರಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಪ್ರೇಮಮಯಿ’.
ಈ ಹಿಂದೆ “ದೌಲತ್’ ಚಿತ್ರವನ್ನು ನಿರ್ದೇಶಿಸಿದ್ದ ರಘುವರ್ಮ “ಪ್ರೇಮಮಯಿ’ ಚಿತ್ರಕ್ಕೆಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಪ್ರೇಮಮಯಿ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ರಘುವರ್ಮ, “ಇಲ್ಲಿಯವರೆಗೆ ಪ್ರೀತಿಯನ್ನು ಒಂದೊಂದು ರೀತಿಯಲ್ಲಿ ವರ್ಣಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅದೆಲ್ಲದಕ್ಕಿಂತಲೂ ವಿಭಿನ್ನವಾಗಿ ವರ್ಣಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರೀತಿ-ಪ್ರೇಮ ಎಂದರೆ ಕೇವಲ ಹುಡುಗ -ಹುಡುಗಿಯ ನಡುವೆ ಮಾತ್ರ ಇರುವಂಥದಲ್ಲ. ತಂದೆ -ಮಗ, ಸ್ನೇಹಿತರು ಹೀಗೆ ಎಲ್ಲಕಡೆಯೂ ಇರುವಂಥದ್ದು. ಅದರ ವ್ಯಾಪ್ತಿ ಮತ್ತು ವಿಸ್ತಾರ ದೊಡ್ಡದು ಎಂಬ ಅಂಶವನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಬರೀ ಪ್ರೀತಿ-ಪ್ರೇಮ ಮಾತ್ರವಲ್ಲದೆ ಇಲ್ಲೊಂದು ತ್ಯಾಗದ ಕಥೆಯಿದೆ. ನವಿರಾದ ಲವ್ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಹೀಗೆ ಎಲ್ಲ ಅಂಶಗಳೂ ಇದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸಿನಿಮಾ ಇದಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ
“ಪ್ರೇಮಮಯಿ’ ಚಿತ್ರದಲ್ಲಿ ನವ ಪ್ರತಿಭೆ ರಾಮು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ನವನಟಿ ಸುರಕ್ಷಿತಾ ನಾಯಕಿಯಾಗಿ ತೆರೆಮೇಲೆ ಜೋಡಿಯಾಗುತ್ತಿದ್ದಾರೆ.
ಉಳಿದಂತೆ ಅಂಜನಪ್ಪ, ಶಿವಕುಮಾರ್ ಆರಾಧ್ಯ, ಸಂದೀಪ್ ಮಲಾನಿ, ಕಲಾರತಿ ಮಹದೇವ್, ಕುರಿಬಾಂಡ್ ರಂಗ, ವಿಕ್ಟರಿ ವಾಸು, ಶಿಲ್ಪಾ ಮೂರ್ತಿ, ಮಂಜುನಾಥ್ ಮೊದಲಾದವರು “ಪ್ರೇಮಮಯಿ ‘ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಸದ್ಯ “ಪ್ರೇಮಮಯಿ’ ಚಿತ್ರದ ಮುಹೂರ್ತ ನಡೆಸಿರುವ ಚಿತ್ರತಂಡ ಶಿವಮೊಗ್ಗ, ಗೋವಾ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲು ಯೋಚನೆ ಹಾಕಿಕೊಂಡಿದೆ.
“ಶ್ರೀಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್’ ಬ್ಯಾನರ್ನಲ್ಲಿ ಎಲ್. ನಾಗಭೂಷಣ್, ಕಾರ್ತಿಕ್ ವೆಂಕಟೇಶ್, ಪಿ.ಎನ್.ಕಿರಣ್ ಕುಮಾರ್ ಜಂಟಿಯಾಗಿ “ಪ್ರೇಮಮಯಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಐದು ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಕೀರ್ತಿವರ್ಧನ್ ಛಾಯಾಗ್ರಹಣ, ಭಾರ್ಗವ್ ಸಂಕಲನವಿದೆ.
ಎಲ್ಲ ಅಂದುಕೊಂಡಂತೆ ನಡೆದರೆ, ಮುಂಬರುವ ಸಂಕ್ರಾಂತಿ ವೇಳೆಗೆ “ಪ್ರೇಮಮಯಿ’ಯನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.