ಚಿತ್ರರಂಗದ ಪರವಾಗಿ ಪುನೀತ್ ನಮನ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನ.16ರಂದು ಕಾರ್ಯಕ್ರಮ
Team Udayavani, Nov 13, 2021, 10:08 AM IST
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಚಿತ್ರರಂಗದ ಪರವಾಗಿ “ಪುನೀತ್ ನಮನ’ ಕಾರ್ಯಕ್ರಮವನ್ನು ಇದೇ ನ. 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ ರಂಗ ಮತ್ತು ಸಮಾಜದ ಇತರ ಕ್ಷೇತ್ರಗಳ ಪ್ರಮುಖ ಗಣ್ಯರು ಹಾಜರಾಗಲಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, “ಪುನೀತ್ ನಮನ’ ಕಾರ್ಯಕ್ರಮದ ರೂಪು-ರೇಷೆಗಳ ಕುರಿತು ಮಾಹಿತಿ ನೀಡಿತು. ಚಿತ್ರೋದ್ಯಮದ ಪರವಾಗಿ ನಡೆಯಲಿರುವ ನ. 16ರಂದು ನಡೆಯಲಿರುವ “ಪುನೀತ್ ನಮನ’ ಕಾರ್ಯಕ್ರಮದಲ್ಲಿ ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರ ಸಂಘ, ಪ್ರದರ್ಶಕರು ಮತ್ತು ವಿತರಕರು, ಚಲನಚಿತ್ರ ಕಾರ್ಮಿಕರ ಒಕ್ಕೂಟ ಹೀಗೆ ಇಡೀ ಚಿತ್ರೋದ್ಯಮದ ವಿವಿಧ ವಲಯಗಳು, ವಿಭಾಗಗಳು, ಅಂಗಸಂಸ್ಥೆಗಳು ಭಾಗಿಯಾಗಲಿದೆ.
ಇದನ್ನೂ ಓದಿ:- ಜಾಗತಿಕ ವ್ಯಾಪ್ತಿ ವಿಸ್ತರಿಸುತ್ತಿರುವ ಬಿಟಿಎಸ್
ವಿವಿಧ ಕ್ಷೇತ್ರಗಳ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಿನಿಮಾ ಮಾತ್ರವಲ್ಲದೆ, ರಾಜಕೀಯ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು ಹಾಜರಾಗಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ವಿವಿಧ ಚಿತ್ರಗಳ ಪ್ರಮುಖ ಸ್ಟಾರ್ ಮತ್ತು ಗಣ್ಯರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
“ಪುನೀತ್ ನಮನ’ ಚಿತ್ರರಂಗದಿಂದ ಆಯೋಜಿಸುತ್ತಿ ರುವ ಕಾರ್ಯಕ್ರಮವಾಗಿದ್ದು, ನಿಯಮಿತ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಕೇವಲ ಚಿತ್ರರಂಗದವರು ಮತ್ತು ಆಹ್ವಾನಿತರಿಗಷ್ಟೇ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಮತಿ ಇರುವುದಿಲ್ಲ.
ಬದಲಾಗಿ ವಾಹಿನಿಗಳು, ಸೋಶಿಯಲ್ ಮೀಡಿಯಾ ಮೂಲಕ ನೇರ ಪ್ರಸಾರಕ್ಕೆ ಅವಕಾಶಕ್ಕೆ ಮಾಡಿಕೊಡಲಾಗಿದ್ದು, ಅಭಿಮಾನಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ ರಾಮಕೃಷ್ಣ (ಪ್ರವೀಣ್ ಕುಮಾರ್), ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್, ಎ. ಗಣೇಶ್, ಎಂ. ನರಸಿಂಹಲು, ಉಪಾಧ್ಯಕ್ಷರಾದ ನಾಗಣ್ಣ, ಉಮೇಶ್ ಬಣಕಾರ್ ಸೇರಿದಂತೆ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರೋದ್ಯಮದ ಪ್ರಮುಖರು ಇದ್ದರು.