ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ರಾಧಿಕಾ ಪಂಡಿತ್ ಭರವಸೆ
Team Udayavani, Jun 9, 2021, 12:34 PM IST
ಬೆಂಗಳೂರು: ಇತ್ತೀಚಿಗಷ್ಟೆ ನಟ ರಾಕಿಂಗ್ ಸ್ಟಾರ್ ಯಶ್ ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗದ 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ 5 ಸಾವಿರ ರೂ. ಆರ್ಥಿಕ ನೆರವು ನೀಡುವ ಮೂಲಕ ಕಾರ್ಮಿಕರ ಕುಟುಂಬಗಳಿಗೆ ನೆರವಾಗಿದ್ದರು. ಯಶ್ ಕಾರ್ಯಕ್ಕೆ ಚಿತ್ರರಂಗದಿಂದ, ಜನಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವಂತೆಯೇ ಯಶ್ ಪತ್ನಿ ರಾಧಿಕಾ ಪಂಡಿತ್, ಕೋವಿಡ್ನಿಂದ ಸಂಕಷ್ಟದಲ್ಲಿರುವವರಿಗೆ, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ, ಭವಿಷ್ಯದ ಬಗ್ಗೆ ಆತಂಕ ಮತ್ತು ನೋವಿನಲ್ಲಿರುವವರಿಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ.
ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಇಬ್ಬರು ಮಕ್ಕಳ ಜೊತೆ ಬೀಚ್ನಲ್ಲಿ ಕುಳಿತಿರುವ ಫೋಟೋವನ್ನು ಶೇರ್ ಮಾಡಿರುವ ರಾಧಿಕಾ ಪಂಡಿತ್, “ಇದು ತುಂಬ ಕಷ್ಟದ ಸಮಯವಾಗಿದೆ. ನಾವೆಲ್ಲರೂ ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಸಂಕಟ ಮತ್ತು ದುಃಖಕ್ಕೆ ಸಾಕ್ಷಿಯಾಗಿದ್ದೇವೆ. ಎಲ್ಲರೂ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಮಾನಸಿಕವಾಗಿ ನೋವು ಅನುಭವಿಸುತ್ತಿದ್ದೇವೆ. ಭವಿಷ್ಯ ಏನು ಎನ್ನುವುದು ನಮಗೆ ತಿಳಿದಿಲ್ಲ. ಆದರೆ ಇಂಥ ಪರಿಸ್ಥಿತಿಯಲ್ಲೂ ಪ್ರತಿದಿನ ದಯವಿಟ್ಟು ಒಂದು ಮಾತನ್ನು ನೀವೇ ಹೇಳಿಕೊಳ್ಳಿ.
ಇದನ್ನೂ ಓದಿ: ಏನಿದು ಕ್ಲಬ್ ಹೌಸ್ ಆ್ಯಪ್: ಇದರ ಜನಪ್ರಿಯತೆಗೆ ಕಾರಣಗಳೇನು ?
ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭವಿಷ್ಯದ ಮೇಲೆ ಭರವಸೆ ಇಡುತ್ತೇವೆ, ನಂಬಿಕೆಯಿಟ್ಟು ಹೋರಾಡುತ್ತೇವೆ, ಎಲ್ಲರೂ ಜೊತೆಯಾಗಿ ನಿಂತು ಈ ಸಂಕಷ್ಟದಿಂದ ಮತ್ತೆ ಹೊರಬರುತ್ತೇವೆ’ ಎಂದಿರುವ ರಾಧಿಕಾ ಪಂಡಿತ್, ಕೋವಿಡ್ ಸಂಕಷ್ಟದಿಂದ ಬಳಲುತ್ತಿರುವವರಿಗೆ ಸೋಶಿಯಲ್ ಮೀಡಿಯಾ ಮೂಲಕ ಭರವಸೆ ತುಂಬುವ ಪ್ರಯತ್ನ ಮಾಡಿದ್ದಾರೆ.