ನಿರ್ಮಾಪಕ ಪುಷ್ಕರ್ ಗೆ ರಕ್ಷಿತ್ ನೀಡಿದ ಹಣವೇಷ್ಟು?ಯಾರಿಗೂ ಗೊತ್ತಿರದ ಸತ್ಯ ಬಿಚ್ಚಿಟ್ಟ ರಿಷಬ್
Team Udayavani, Jul 9, 2021, 2:53 PM IST
ಬೆಂಗಳೂರು: ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ (2019) ತೆರೆ ಕಂಡು ಎರಡು ವರ್ಷಗಳು ಕಳೆಯುತ್ತ ಬಂತು. ಕನ್ನಡ ಚಿತ್ರರಂಗದಲ್ಲಿ ಇದೊಂದು ಅದ್ಭುತ ಸಿನಿಮಾಗಳ ಸಾಲಿಗೆ ಸೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರ ಬಿಡುಗಡೆಗೊಂಡು ಎರಡು ವರ್ಷಗಳ ನಂತರ ಇದೀಗ ಇದರ ಲಾಭ-ನಷ್ಟದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.
ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರಿಗೆ ನಷ್ಟವಾಯಿತು ಎಂದು ತೋರಿಸಲಾಯಿತು. ಹೀಗಾಗಿ ರಕ್ಷಿತ್ ಶೆಟ್ಟಿ ಜೊತೆ ವರ್ಕ್ ಮಾಡಿದ ಅವರ ಆಪ್ತರು ತಮ್ಮ ಅಭಿಪ್ರಾಯಗಳನ್ನ ಹೊರಹಾಕುತ್ತಿದ್ದಾರೆ. ಅದರಲ್ಲೂ ರಕ್ಷಿತ್ ಸಿನಿ ಜರ್ನಿಯಲ್ಲಿ ಪ್ರಾರಂಭದಿಂದಲೂ ಇರುವ ರಿಷಬ್ ಶೆಟ್ಟಿ ಅವರು ಅವನೇ ಶ್ರೀಮನ್ನಾರಾಯಣ ಸಿನಿಮಾದ ಕುರಿತು ಯಾರಿಗೂ ಗೊತ್ತಿರದ ಕೆಲವೊಂದು ವಿಚಾರಗಳನ್ನ ಹೊರಹಾಕಿದ್ದಾರೆ.
ವಿಡಿಯೋ ಮೂಲಕ ಮಾತನಾಡಿರುವ ರಿಷಬ್, ‘ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ಮಾಪಕರಿಗೆ ಲಾಸ್ ಮಾಡಿದ ಚಿತ್ರವಲ್ಲ. ಆದರೆ, ಚಿತ್ರಕ್ಕಾಗಿ ತಂದಿದ್ದ ಸಾಲದ ಮೇಲಿನ ಬಡ್ಡಿಯೂ ಸಾಲದಷ್ಟೇ ಬೆಳೆದ ಕಾರಣ ಕಷ್ಟವಾಯ್ತು. ಚಿತ್ರದ ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿ 20 ಕೋಟಿ ಕೊಟ್ಟರು. ತಂತ್ರಜ್ಞರಿಗೆ ಸಂಭಾವನೆಯನ್ನು ರಕ್ಷಿತ್ ಅವರೇ ಕೊಟ್ಟರು. 777 ಚಾರ್ಲಿ ಮತ್ತು ಸಪ್ತಸಾಗರದಾಚೆ ಎಲ್ಲೋ ಚಿತ್ರಗಳಿಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇನ್ನು ಕಿರಿಕ್ ಪಾರ್ಟಿ ಚಿತ್ರದಿಂದ ಬಂದ ಲಾಭವನ್ನು ಎಲ್ಲರ ಜೊತೆ ಹಂಚಿಕೊಂಡ ರಕ್ಷಿತ್ ಶೆಟ್ಟಿಯವರ ಒಳ್ಳೆತನವನ್ನು ಬಿಚ್ಚಿಟ್ಟಿರುವ ರಿಷಬ್, ಕೋವಿಡ್ ಕಷ್ಟದಲ್ಲಿ ತಂಡದಲ್ಲಿದ್ದವರಿಗೆ ತಲಾ 5 ಸಾವಿರ ರೂ. ನೀಡಿ ಕಷ್ಟಕ್ಕೆ ನೆರವಾಗಿದ್ದಾರೆ. ಇದನ್ನು ಅವರು ಎಲ್ಲಿಯೂ ಹೇಳಿಲ್ಲ. ಇಂತಹ ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತಾಡುವುದು ಸರಿಯಲ್ಲ. ಕನ್ನಡ ಚಿತ್ರರಂಗ ಚಿಕ್ಕದು, ಇಲ್ಲಿ ಮಾಧ್ಯಮಗಳು ಹಾಗೂ ನಾವು ಜೊತೆಯಾಗಿ ಕೆಲಸ ಮಾಡಿದರೆ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯ ಎಂದಿದ್ದಾರೆ ರಿಷಬ್.