ರಂಗನಾಯಕಿಯ ಆಗಮನಕ್ಕೆ ಕ್ಷಣಗಣನೆ ಶುರು!
Team Udayavani, Oct 23, 2019, 12:11 PM IST
ಪ್ರತಿಭಾವಂತ ನಟಿ ಅದಿತಿ ಪ್ರಭುದೇವ ನಟನೆಯಲ್ಲಿ ಮೂಡಿ ಬಂದಿರೋ ಚಿತ್ರ ರಂಗನಾಯಕಿ. ಸಿನಿಮಾವೊಂದು ಯಾವ್ಯಾವ ದಿಕ್ಕಿನಲ್ಲಿ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಬಹುದೋ ಅದೆಲ್ಲ ರೀತಿಯಲ್ಲಿಯೂ ಚರ್ಚೆಗೆ ಕಾರಣವಾಗಿರೋ ಈ ಚಿತ್ರ ಇದೇ ನವೆಂಬರ್ ಒಂದನೇ ತಾರೀಕಿನಂದು ಬಿಡುಗಡೆಯಾಗಲಿದೆ. ಈ ಮೂಲಕ ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಮತ್ತೊಂದು ಮ್ಯಾಜಿಕ್ಕು ಶುರುವಾಗಲು ಇದೀಗ ಕ್ಷಣಗಣನೆ ಶುರುವಾಗಿ ಬಿಟ್ಟಿದೆ.
ದಯಾಳ್ ಪದ್ಮನಾಭನ್ ಅವರ ಸಿನಿಮಾ ಗ್ರಾಫ್ ಅವರ ಭಿನ್ನ ಹಾದಿಯ ಪಯಣವನ್ನು ನಿರೂಪಿಸುತ್ತದೆ. ಹಗ್ಗದ ಕೊನೆಯಂಥಾ ಸಿನಿಮಾಗಳ ಜೊತೆಗೇ ಅವರು ಆ ಕರಾಳ ರಾತ್ರಿ ತ್ರಯಂಬಕಂನಂಥಾ ದೃಶ್ಯ ಕಾವ್ಯಗಳ ಮೂಲಕ ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸುವಲ್ಲಿ ಗೆದ್ದಿದ್ದಾರೆ. ಈ ಕಾರಣದಿಂದಲೇ ದಯಾಳ್ ಚಿತ್ರ ಯಾವ ಜಾನರಿನದ್ದೇ ಆಗಿದ್ದರೂ ಅದರಲ್ಲಿ ಗಹನವಾದದ್ದೇ ನೋ ಇದ್ದೇ ಇರುತ್ತದೆ ಎಂಬಂಥಾ ನಂಬಿಕೆ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ. ಆದರೆ ಇದೇ ನವೆಂಬರ್ ಒಂದರಂದು ಬಿಡುಗಡೆಯಾಗಲಿರುವ ರಂಗನಾಯಕಿ ಚಿತ್ರದ ಖದರ್ ಮಾತ್ರ ಈವರೆಗಿನದ್ದಕ್ಕಿಂತೂ ವಿಶೇಷವಾಗಿದೆ.
ರಂಗನಾಯಕಿ ನಾರಾಯಣ್ ನಿರ್ಮಾಣ ಮಾಡಿರೋ ಚಿತ್ರ. ಇದರಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಇದು ಅತ್ಯಾಚಾರದಂಥಾ ಪೈಶಾಚಿಕ ಕೃತ್ಯಕ್ಕೀಡಾದ ಹೆಣ್ಣೊಬ್ಬಳ ತಲ್ಲಣಗಳನ್ನು ಬಿಚ್ಚಿಡುತ್ತಲೇ ಆಕೆ ಹೇಗೆ ಈ ಸಮಾಜವನ್ನು ಎದುರಿಸುತ್ತಾಳೆಂಬಂಥಾ ಕಥಾ ಹಂದರವನ್ನು ಹೊಂದಿರೋ ರಂಗನಾಯಕಿಯ ಉದ್ದೇಶ ಇಂಥಾ ದುಷ್ಕೃತ್ಯಗಳಿಗೆ ತುತ್ತಾದವರ ಬಗ್ಗೆ ಸಿಂಪಥಿ ಗಿಟ್ಟಿಸೋದಲ್ಲ. ಇದರಲ್ಲಿ ಪರಿಣಾಮಕಾರಿಯಾದ ಸಂದೇಶಗಳಿವೆ. ಒಂದೇ ಸಲಕ್ಕೆ ಎಲ್ಲ ಮನಸುಗಳಿಗೆ ಕನೆಕ್ಟ್ ಆಗುವಂಥಾ ಅಂಶಗಳಿವೆ. ಅದೆಲ್ಲವೂ ನವೆಂಬರ್ ಒಂದರಂದು ನಿಮ್ಮೆದುರು ಜಾಹೀರಾಗಲಿವೆ.