ಪಿಆರ್ಕೆ “ಕವಲುದಾರಿ’ ಬಿಡುಗಡೆಗೆ ರೆಡಿ
Team Udayavani, Mar 5, 2019, 6:07 AM IST
ಪುನೀತ್ರಾಜಕುಮಾರ್ ಅವರ ಪಿಆರ್ಕೆ ಬ್ಯಾನರ್ನ ಮೊದಲ ನಿರ್ಮಾಣದ ಚಿತ್ರ “ಕವಲುದಾರಿ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯಾವುದೇ ಕಟ್ ಹೇಳದೆ, ಎರಡು ಮ್ಯೂಟ್ಗೆ ಸೂಚಿಸಿ ಯು/ಎ ಪ್ರಮಾಣ ಪತ್ರ ನೀಡಿದೆ. ನಿರ್ದೇಶಕ ಹೇಮಂತ್ರಾವ್ ಅವರು ಸದ್ಯಕ್ಕೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದಾರೆ. ಅಂದಹಾಗೆ, “ಕವಲು ದಾರಿ’ ಚಿತ್ರದ ಮೊದಲ ಹಾಡು ಇಂದು (ಮಂಗಳವಾರ) ಬಿಡುಗಡೆಗೊಳ್ಳುತ್ತಿದೆ.
ಪಿಆರ್ಕೆ ಆಡಿಯೋ ಕಂಪೆನಿ ಮೂಲಕ ಸಂಚಿತ್ ಹೆಗ್ಡೆ ಹಾಡಿರುವ ನಾಗಾರ್ಜುನ್ ಶರ್ಮಾ ಬರೆದಿರುವ “ನಿಗೂಢ ನಿಗೂಢ’ ಎಂಬ ಹಾಡನ್ನು ಇಂದು ಸಂಜೆ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಚಿತ್ರದ ಆಡಿಯೋ ವಿಶೇಷತೆ ಬಗ್ಗೆ ಹೇಳುವ ನಿರ್ದೇಶಕ ಹೇಮಂತ್ರಾವ್, “ಪಿಆರ್ಕೆ ಬ್ಯಾನರ್ನ ಮೊದಲ ಚಿತ್ರದ ಹಾಡನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತಿದೆ. ಉಳಿದಂತೆ ಪ್ರತಿ ಸೋಮವಾರ ಒಂದೊಂದು ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಸಂಚಿತ್ ಹೆಗ್ಡೆ ಹಾಡಿರುವ “ನಿಗೂಢ ನಿಗೂಢ’ ಎಂಬ ಮೊದಲ ಲಿರಿಕಲ್ ವಿಡಿಯೋ ಹೊರಬರುತ್ತಿದೆ. ಸಾಮಾನ್ಯವಾಗಿ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ಮೇಕಿಂಗ್ ಫೋಟೋ ಮತ್ತು ಸ್ಟಿಲ್ಸ್ಗಳೊಂದಿಗೆ ಹಾಡು ಬಿಡುಗಡೆ ಮಾಡಲಾಗುತ್ತದೆ. ಆದರೆ, “ಕವಲುದಾರಿ’ ಚಿತ್ರತಂಡ ಕೊಂಚ ವಿಭಿನ್ನವಾಗಿ ಯೋಚಿಸಿದ್ದು, ಲಿರಿಕಲ್ ವಿಡಿಯೋವನ್ನು ವಿಭಿನ್ನವಾಗಿಯೇ ಬಿಡುಗಡೆ ಮಾಡುವ ಪ್ರಯತ್ನ ಮಾಡಿದೆ.
ಅದು ಹೇಗಿರಲಿದೆ ಎಂಬುದಕ್ಕೆ ಮಂಗಳವಾರ ಸಂಜೆವರೆಗೆ ಕಾಯಬೇಕು. ಮೊದಲ ಹಾಡು ಜೋರು ಸದ್ದು ಮಾಡಲಿದೆ ಎಂಬ ನಂಬಿಕೆ ನಮಗಿದೆ. ಆ ಹಾಡಿಗೆ ನಾಗಾರ್ಜುನ್ ಶರ್ಮಾ ಎಂಬ ಹೊಸ ಪ್ರತಿಭೆ ಗೀತೆ ರಚಿಸಿದೆ. ಸಂಚಿತ್ ಹೆಗ್ಡೆ ಅವರ ಟಿಪಿಕಲ್ ಶೇಡ್ ಬಿಟ್ಟು ಮೂಡಿಬಂದಿರುವ ಹಾಡಿದು. ಹಾಗಾಗಿ ವಿಶೇಷವಾಗಿಯೇ ಅದನ್ನು ಹೊರತರಲಾಗುತ್ತಿದೆ’ ಎಂಬುದು ನಿರ್ದೇಶಕರ ಮಾತು.
ಇನ್ನು, “ಕವಲುದಾರಿ’ ಚಿತ್ರದ ಹೈಲೈಟ್ ಅಂದರೆ, ಅದು ಹಿನ್ನೆಲೆ ಸಂಗೀತ. ಇಲ್ಲಿ ಇಡೀ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಮಾತಾಡಲಿದೆ. ಪ್ರತಿ ದೃಶ್ಯದಲ್ಲೂ ಹೊಸಬಗೆಯ ಸಂಗೀತ ಕೇಳಿಸಲಿದೆ. ಇದೇ ಮೊದಲ ಬಾರಿಗೆ ಮಾಸಿಡೋನಿಯಾ ದೇಶದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿಸಲಾಗಿದೆ. ಆ ದೇಶದಲ್ಲಿ ಈಗಾಗಲೇ ತಮಿಳಿನ “ಕಾಲ’, “ಪೆಟ್ಟಾ’,”ವಡೆಚೆನ್ನೈ’ ಸೇರಿದಂತೆ ಹಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತದ ಸ್ಪರ್ಶವಿದೆ. ಇದೇ ಮೊದಲ ಸಲ ಕನ್ನಡದ “ಕವಲುದಾರಿ’ ಚಿತ್ರಕ್ಕೆ ಅಲ್ಲಿ ಹಿನ್ನೆಲೆ ಸಂಗೀತಕ್ಕೆ ಸ್ಪರ್ಶ ನೀಡಲಾಗಿದೆ.
ಈ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಆ ದೇಶದ ನೂರು ಜನ ಸಂಗೀತಗಾರರ ಸ್ಪರ್ಶವಿದೆ ಎಂಬುದೇ ವಿಶೇಷ. ಮುಖ್ಯವಾಗಿ ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅದರಲ್ಲೂ ಎಮೋಷನ್ಸ್ಗೆ ಹೆಚ್ಚು ಜಾಗವಿದೆ. ಎಮೋಷನ್ಸ್ ಎಲ್ಲರನ್ನು ತಟ್ಟಬೇಕು. ಹಾಗಾಗಿ ಅಂತಹ ಹಿನ್ನೆಲೆ ಸಂಗೀತದ ಸ್ಪರ್ಶ ಬೇಕಿತ್ತು. ಪುನೀತ್ ಅವರ ಸಂಪೂರ್ಣ ಪ್ರೋತ್ಸಾಹ ಸಿಕ್ಕಿದ್ದರಿಂದಲೇ ಅದು ಸಾಧ್ಯವಾಗಿದೆ ಎನ್ನುತ್ತಾರೆ ನಿರ್ದೇಸಕ ಹೇಮಂತ್ರಾವ್.
ಅಂದಹಾಗೆ, “ಕವಲುದಾರಿ’ ತಡ ಆಯ್ತು ಎನ್ನುವ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತಿದೆ. ಅದಕ್ಕೆ ಕಾರಣ, ಹಿನ್ನೆಲೆ ಸಂಗೀತ ಯಾಕೆಂದರೆ, ನೂರು ಮಂದಿ ಸಂಗೀತಗಾರರು ಪ್ರತಿ ದೃಶ್ಯ ವೀಕ್ಷಿಸಿ, ಅದಕ್ಕೆ ಸಂಗೀತ ಸಂಯೋಜಿಸುತ್ತಿದ್ದರು. ಅದು ಮೂರು ತಿಂಗಳ ಕೆಲಸ. ಹಾಗಾಗಿ ಲೇಟ್ ಆಗಿದೆ. ಶೀಘ್ರದಲ್ಲೇ “ಕವಲುದಾರಿ’ ಬಿಡುಗಡೆ ಆಗಲಿದೆ ಎಂಬುದು ಅವರ ಹೇಳಿಕೆ.
ಪಿಆರ್ಕೆಯಿಂದ ಈ ವರ್ಷ ಮೂರು ಸಿನಿಮಾ: ಪುನೀತ್ರಾಜಕುಮಾರ್ ಅವರು “ಪಿಆರ್ಕೆ’ ಎಂಬ ತಮ್ಮದೇ ಬ್ಯಾನರ್ ಹುಟ್ಟುಹಾಕಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದಿರುವುದು ನಿಮಗೆ ಗೊತ್ತೇ ಇದೆ. ಈಗಾಗಲೇ ಆ ಬ್ಯಾನರ್ನಡಿ ನಾಲ್ಕು ಸಿನಿಮಾಗಳು ನಡೆಯುತ್ತಿದೆ. “ಕವಲುದಾರಿ’, “ಮಾಯಾಬಾಜರ್’, ರಘು ಸಮರ್ಥ್ ಹಾಗೂ ಪನ್ನಗಾಭರಣ ನಿರ್ದೇಶನದ ತಲಾ ಒಂದೊಂದು ಚಿತ್ರಗಳು ನಡೆಯುತ್ತಿವೆ. ಪಿಆರ್ಕೆ ಬ್ಯಾನರ್ನಲ್ಲಿ ಮೊದಲು ಆರಂಭವಾಗಿದ್ದು “ಕವಲುದಾರಿ’.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿದೆ. “ಮಾಯಾ ಬಜಾರ್’ ಕೂಡಾ ಬಹುತೇಕ ಮುಗಿದಿದೆ. ತಮ್ಮ ಹೋಂ ಬ್ಯಾನರ್ ಬಗ್ಗೆ ಮಾತನಾಡುವ ಪುನೀತ್, “ಸದ್ಯ ನಮ್ಮ ಬ್ಯಾನರ್ನಲ್ಲಿ ನಾಲ್ಕು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಈ ವರ್ಷ ಮೂರು ಸಿನಿಮಾಗಳು ತೆರೆಕಾಣುವ ಸಾಧ್ಯತೆ ಇದೆ. ಎಲ್ಲಾ ಕಥೆಗಳು ಹೊಸ ಬಗೆಯಿಂದ ಕೂಡಿದೆ. ನಾನಂತೂ ಈ ಸಿನಿಮಾಗಳ ಬಗ್ಗೆ ಎಕ್ಸೆ„ಟ್ ಆಗಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ