ರಿಷಭ್ ಶೆಟ್ಟಿ ಚಿತ್ರಕ್ಕೆ “ಅಭಿಮಾನಿ ಉಡುಗೊರೆ’
ತಡವಾಗಿ ಚಿತ್ರ ವೀಕ್ಷಿಸಿ, ಅಚ್ಚರಿ ಗಿಫ್ಟ್
Team Udayavani, Feb 1, 2020, 7:01 AM IST
ರಿಷಭ್ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ, ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸಿದ ರೀತಿ ಎಲ್ಲರಿಗೂ ಗೊತ್ತೇ ಇದೆ. ಯಾವುದೇ ಸ್ಟಾರ್ ಇಲ್ಲದೆ ಕಂಟೆಂಟ್ ಆಧಾರಿತ ಚಿತ್ರವೊಂದು ಬಾಕ್ಸಾಫೀಸ್ನಲ್ಲಿ ಎಷ್ಟರ ಮಟ್ಟಿಗೆ ಸಕ್ಸಸ್ ತಂದುಕೊಡಬಹುದು ಎಂಬುದಕ್ಕೆ ಇತ್ತೀಚಿನ ವರ್ಷಗಳಲ್ಲಿ “ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಕಾಸರಗೋಡು’ ಅತ್ಯುತ್ತಮ ಉದಾಹರಣೆ ಎಂದೇ ಹೇಳಲಾಗುತ್ತದೆ.
ಇತ್ತೀಚೆಗಷ್ಟೇ “ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಕಾಸರಗೋಡು’ ಚಿತ್ರ 2018ನೇ ಸಾಲಿನ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿಯನ್ನೂ ಬಾಚಿಗೊಂಡಿದೆ. ಈಗ ಈ ಚಿತ್ರವನ್ನು ಡಿಜಿಟಲ್ ಪ್ಲಾಟ್ ಫಾರ್ಮ್ನಲ್ಲಿ ವೀಕ್ಷಿಸಿದ ಮೈಸೂರಿನ ಪುಸ್ತಕ ಪ್ರಕಾಶಕ ಭರತ್ ರಾಮಸ್ವಾಮಿ ಎನ್ನುವ ಪ್ರೇಕ್ಷಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿ, ನಿರ್ದೇಶಕ ರಿಷಭ್ ಶೆಟ್ಟಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಚಿತ್ರವನ್ನು ತಡವಾಗಿ ನೋಡಿದ ತಪ್ಪಿಗೆ, ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡದ ಕಾರಣಕ್ಕೆ ಪತ್ರದ ಜೊತೆಗೆ ಟಿಕೆಟ್ ದುಡ್ಡು 200 ರೂಪಾಯಿಯನ್ನೂ ಸೇರಿಸಿ ಕಳುಹಿಸಿದ್ದಾರೆ.
ತಮ್ಮ ಚಿತ್ರಕ್ಕೆ ಪ್ರೇಕ್ಷಕರೊಬ್ಬರಿಂದ ಬಂದಿರುವ ಇಂಥದ್ದೊಂದು ಅಚ್ಚರಿಯ ಉಡುಗೊರೆಯ ಬಗ್ಗೆ ಮಾತನಾಡಿರುವ ರಿಷಭ್ ಶೆಟ್ಟಿ, “ನಾವು ಮಾಡಿದ ಸಿನಿಮಾಕ್ಕೆ ಎಷ್ಟೇ ದೊಡ್ಡ ಪ್ರಶಸ್ತಿ ಬಂದರೂ, ಅದು ಜನರಿಂದ ಬರುವ ಇಂಥ ಪ್ರಶಂಸೆಯ ಮುಂದೆ ಎಲ್ಲವೂ ನಗಣ್ಯವೆನಿಸುತ್ತದೆ. ಪ್ರೇಕ್ಷಕರು ಮೆಚ್ಚಿಕೊಂಡರೇನೆ, ಚಿತ್ರದ ನಿಜವಾದ ಗೆಲುವು. ಪ್ರೇಕ್ಷಕರಿಂದ ಬಂದ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ನಾನು ಮತ್ತು ಚಿತ್ರತಂಡ ಸ್ವೀಕರಿಸುತ್ತೇವೆ’ ಎಂದಿದ್ದಾರೆ.