ಹೊಸ ದಾರಿಯ ನಿರೀಕ್ಷೆಯಲ್ಲಿ ರಿಷಿ
ಕವಲುದಾರಿ ನಟ ಏನಂತಾರೆ ಗೊತ್ತಾ?
Team Udayavani, Apr 11, 2019, 3:00 AM IST
“ಆಪರೇಷನ್ ಅಲಮೇಲಮ್ಮ’ ಚಿತ್ರದ ನಂತರ ನಟ ರಿಷಿ ಅಭಿನಯದ ಮತ್ತೂಂದು ಚಿತ್ರ ಕವಲುದಾರಿ ನಾಳೆ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ “ಉದಯವಾಣಿ’ ಜೊತೆ ಮಾತನಾಡಿದ ರಿಷಿ, ಕವಲುದಾರಿ ಜರ್ನಿ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
* ಪಿಆರ್ಕೆ ಪ್ರೊಡಕ್ಷನ್ನಲ್ಲಿ “ಕವಲುದಾರಿ’ ಚಿತ್ರದ ಅನುಭವ ಹೇಗಿತ್ತು?
ಅಪ್ಪು ಸಾರ್ ತಮ್ಮ ಪ್ರೊಡಕ್ಷನ್ನಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅಂದಾಗಲೇ ಅದರ ಬಗ್ಗೆ ಎಲ್ಲರಿಗೂ ಅನೇಕ ನಿರೀಕ್ಷೆಗಳಿರುತ್ತವೆ. ಹಾಗಾಗಿ ಈ ಚಿತ್ರದಲ್ಲಿ ಖುಷಿ ಮತ್ತು ಭಯ ಎರಡೂ ನನಗಿದೆ. ಆದರೆ ಇಡೀ ಚಿತ್ರ ನನಗೊಂದು ಒಳ್ಳೆಯ ಅನುಭವ ಕೊಟ್ಟಿದೆ. ನಾವು ಕೂಡ ಒಂದೊಳ್ಳೆ ಚಿತ್ರವನ್ನು ಕೊಡುತ್ತಿದ್ದೇವೆ ಎಂಬ ಭರವಸೆಯಿದೆ. ಇನ್ನು ಚಿತ್ರದಲ್ಲಿ ಯಾವುದಕ್ಕೂ ಕೊರತೆಯಾಗದಂತೆ, ಕ್ರಿಯೇಟಿವ್ ಕೆಲಸಗಳಿಗೆ ಎಲ್ಲೂ ಹಸ್ತಕ್ಷೇಪ ಮಾಡದೆ, ತುಂಬ ವೃತ್ತಿಪರವಾಗಿ ಸಿನಿಮಾವನ್ನು ಮಾಡಿದ್ದಾರೆ. ದೊಡ್ಡ ಬ್ಯಾನರ್, ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದ್ರೂ, ಮನೆಯ ವಾತಾವರಣವಿತ್ತು.
* “ಕವಲುದಾರಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ನನ್ನ ಹಿಂದಿನ ಚಿತ್ರದ ಪಾತ್ರಕ್ಕೆ ಹೋಲಿಸಿದರೆ, “ಕವಲುದಾರಿ’ಯಲ್ಲಿ ಅದಕ್ಕೆ ಸಂಪೂರ್ಣ ವಿರುದ್ದವಾಗಿರುವ ಪಾತ್ರ ಸಿಕ್ಕಿದೆ. ಇಲ್ಲಿ ನಾನು ಒಬ್ಬ ಪೊಲೀಸ್ ಆಗಿ ಕಾಣಿಸಿಕೊಂಡಿದ್ದೇನೆ. ಒಂದು ತನಿಖೆಯ ಬೆನ್ನತ್ತಿ ಹೋಗುತ್ತೇನೆ. ಅದು ಹೇಗೆಲ್ಲಾ ಟ್ರಾವೆಲ್ ಆಗುತ್ತದೆ ಅನ್ನೋದೆ ಚಿತ್ರದ ಕಥಾಹಂದರ. ಇಡೀ ಚಿತ್ರದಲ್ಲಿ ನನ್ನ ಕ್ಯಾರೆಕ್ಟರ್ ಇರುತ್ತದೆ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ, ಈ ಚಿತ್ರದಲ್ಲಿ ನನಗೆ ಡೈಲಾಗ್ಸ್ ಕಡಿಮೆ. ಜೊತೆಗೆ ತುಂಬ ಗಂಭೀರ ಪಾತ್ರ ಬೇರೆ. ನನ್ನ ಪಾತ್ರ ಗಂಭೀರವಾದರೂ, ಅದರಲ್ಲಿರುವ ಕಾಮಿಡಿ ಎಲಿಮೆಂಟ್ಸ್ ನೋಡುಗರಿಗೆ ನಗು ತರಿಸುತ್ತದೆ.
* “ಕವಲುದಾರಿ’ ಚಿತ್ರವನ್ನು ನೋಡಲು ನೀವು ಕೊಡುವ ಕಾರಣಗಳೇನು?
“ಕವಲುದಾರಿ’ ಇತ್ತೀಚೆಗೆ ಬರುತ್ತಿರುವ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿರುವ ಚಿತ್ರ. ಇದರಲ್ಲಿ ಸಸ್ಪೆನ್ಸ್ ಇದೆ, ಥ್ರಿಲ್ಲರ್ ಇದೆ, ಕಾಮಿಡಿ ಇದೆ, ಒಳ್ಳೆಯ ಮ್ಯೂಸಿಕ್ ಇದೆ. ಆಡಿಯನ್ಸ್ ಒಂದು ಸಿನಿಮಾದಲ್ಲಿ ಏನೇನು ಇರಬೇಕು ಅಂತ ನಿರೀಕ್ಷೆ ಇಟ್ಟುಕೊಂಡು ಬರುತ್ತಾರೋ, ಅದೆಲ್ಲವೂ ಇಲ್ಲಿದೆ. ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಇಲ್ಲಿ ಕಥೆ ಮತ್ತು ನಿರೂಪಣೆಯೇ ಚಿತ್ರದ ಹೈಲೈಟ್. ಇಂಥ ಕಥೆ, ನಿರೂಪಣೆ, ಜಾನರ್ ಎಲ್ಲವೂ ಕನ್ನಡದಲ್ಲಿ ಬಂದಿದ್ದು ತೀರಾ ಕಡಿಮೆ. ಆಡಿಯನ್ಸ್ಗೆ ಒಂದು ಹೊಸ ಅನುಭವ ಕೊಡೋದರಲ್ಲಿ ಅನುಮಾನವಿಲ್ಲ.
* “ಕವಲುದಾರಿ’ ಬಿಡುಗಡೆ ತಡವಾಯಿತು ಎಂಬ ಮಾತಿದೆಯಲ್ಲ?
ನಮ್ಮ ಮೊದಲಿನ ಪ್ಲಾನ್ ಪ್ರಕಾರ ಆಗಿದ್ದರೆ “ಕವಲುದಾರಿ’ ಇಷ್ಟೊತ್ತಿಗೆ ಬಿಡುಗಡೆಯಾಗಿರಬೇಕಿತ್ತು. ಆದ್ರೆ ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಕೆಲವೊಂದು ಬದಲಾವಣೆಗಳಾಯಿತು. ಚಿತ್ರಕಥೆ ಕೆಲವೊಂದು ಬೇರೆ ಬೇರೆ ಅಂಶಗಳನ್ನು ಡಿಮ್ಯಾಂಡ್ ಮಾಡಿದ್ದರಿಂದ, ಆ ಕೆಲಸಕ್ಕೆ ಸಾಕಷ್ಟು ಸಮಯ ಹಿಡಿಯಿತು. ಚಿತ್ರದ ತಾಂತ್ರಿಕ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಂಡಿತು. ಹಾಗಾಗಿ ಬಿಡುಗಡೆ ಸ್ವಲ್ಪ ತಡವಾಗಿದೆ. ಸಿನಿಮಾ ನೋಡಿದಾಗ ತಡವಾಗಿರುವುದಕ್ಕೆ ನಿಜವಾದ ಕಾರಣವೇನು ಅಂತ ಗೊತ್ತಾಗುತ್ತದೆ.
* ನೀವು ಗಮನಿಸಿದಂತೆ, ರಿಲೀಸ್ಗೆ ಮೊದಲು ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
ಚಿತ್ರ ಶುರುವಾದಾಗಿನಿಂದಲೂ ಎಲ್ಲೇ ಹೋದರೂ, ಜನ “ಕವಲುದಾರಿ’ ಸಿನಿಮಾ ಯಾವಾಗ ರಿಲೀಸ್ ಅಂತ ಕೇಳ್ತಿದ್ದರು. ಅದರಲ್ಲೂ ಆಡಿಯೋ, ಟ್ರೇಲರ್ ರಿಲೀಸ್ ಆದ ನಂತರವಂತೂ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈಗಾಗಲೇ ಅಡಿಯೋ, ಟ್ರೇಲರ್ ಎಲ್ಲವೂ ಹಿಟ್ ಆಗಿದೆ. ಸಿನಿಮಾಕ್ಕೆ ಒಳ್ಳೆಯ ಹೈಪ್ ಕ್ರಿಯೇಟ್ ಆಗಿದೆ. ಎಲ್ಲಾ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಆಡಿಯನ್ಸ್ ನಮ್ಮ ಸಿನಿಮಾದ ಬಗ್ಗೆ ಮಾತನಾಡುವಾಗ ಖುಷಿಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು