‘ರೂಪಾಯಿ’ ನಂಬಿದ ಹೊಸಬರು
Team Udayavani, Sep 25, 2022, 5:07 PM IST
ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ರೂಪಾಯಿ ಚಿತ್ರದ “ಕರೆಯದೆ ಹಾಡು’ ಇತ್ತೀಚೆಗೆ ಬಿಡುಗಡೆಯಾಗಿದೆ. ಉತ್ಸವ್ ಗೊನ್ವಾರ್ ಸಾಹಿತ್ಯ, ಆನಂದ್ ರಾಜ ವಿಕ್ರಮ್ ಸಂಗೀತ, ಅನನ್ಯ ಭಟ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಆನಂದ್ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.
“ಮೂಲತಃ ರಂಗಭೂಮಿಯವನಾದ ನಾನು ನಟನಾಗಬೇಕೆಂಬ ಕನಸು ಹೊತ್ತು ಬಂದವನು. ನಿರ್ಮಾಪಕರಿಗೆ ನನ್ನ ಕನಸನ್ನು ತಿಳಿಸುವ ಸಲುವಾಗಿ ಮೂರುಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಪ್ರಮೋಷನಲ್ ವಿಡಿಯೋ ಮಾಡಿ ತೋರಿಸಿದೆ. ಈ ವಿಡಿಯೋ ಇಷ್ಟಪಟ್ಟ ಮಂಜುನಾಥ್ ಹಾಗೂ ಹರೀಶ್ ಹಣಹೂಡಲು ಮುಂದಾದರು. ಆನಂತರ ಚಿತ್ರ ಆರಂಭವಾಯಿತು. ಹೆಸರೇ ಹೇಳುವಂತೆ ಹಣದ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ನಾನು, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ ಹಾಗೂ ರಾಮ ಚಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇವೆ. ನಾನೇ ನಿರ್ದೇಶನ ಮಾಡಿದ್ದೀನಿ. ಇಂದು ಹಾಡು ಬಿಡುಗಡೆಯಾಗಿದೆ. ನವೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆ. ಉತ್ತಮ ಚಿತ್ರ ಮಾಡಿದ್ದೀವಿ ಎಂಬ ಭರವಸೆಯಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ನಾಯಕ ಕಂ ನಿರ್ದೇಶಕ ವಿಜಯ್ ಜಗದಾಲ್.
ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ಎಂದರು ಕೃಷಿ ತಾಪಂಡ. ಪ್ರಮುಖ ಪಾತ್ರಧಾರಿಗಳಾದ ಯಶ್ವಿಕ್, ರಾಮ್ ಚಂದನ್ ಹಾಗೂ ಚಂದನ ರಾಘವೇಂದ್ರ ಸಹ ತಮ್ಮ ಪಾತ್ರದ ಕುರಿತ ಮಾಹಿತಿ ಹಂಚಿಕೊಂಡರು.
ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಮ್, ಛಾಯಾಗ್ರಹಕ ಆರ್.ಡಿ ನಾಗಾರ್ಜುನ ಹಾಗೂ ಸಂಕಲನಕಾರ ಶಿವರಾಜ್ ಮೇಹು ಮಾಹಿತಿ ನೀಡಿದರು. ಸಹ ನಿರ್ಮಾಪಕರಾದ ಯಶವಂತ ಶೆಟ್ಟಿ, ಗಿರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸುನಿದಿನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.