ಎಸ್. ಮಹೇಂದರ್ ಬಿಗ್ ಸ್ಕ್ರೀನ್ ಮೇಲೆ ರೀ-ಎಂಟ್ರಿ…
Team Udayavani, Dec 16, 2019, 7:02 AM IST
ಸುಮಾರು ಹದಿನೆಂಟು ವರ್ಷಗಳ ಹಿಂದೆ “ಗಟ್ಟಿಮೇಳ’ ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್. ಮಹೇಂದರ್, ಈಗ “ಶಬ್ಧ’ ಚಿತ್ರದಲ್ಲಿ ಮತ್ತೂಮ್ಮೆ ತೆರೆಮೇಲೆ ಬರುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಕೂಡ ಶುರುವಾಗಿದ್ದು, ಎಸ್. ಮಹೇಂದರ್ ಸಕಲೇಶಪುರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ತಮ್ಮ ರೀ-ಎಂಟ್ರಿಯ ಬಗ್ಗೆ ಮಾತನಾಡುವ ಎಸ್. ಮಹೇಂದರ್, “ಈ ಹಿಂದೆ ಕೂಡ ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸುವಂತೆ ಅವಕಾಶಗಳು ಬಂದಿದ್ದರೂ, ನಾನು ಒಪ್ಪಿಕೊಂಡಿರಲಿಲ್ಲ. ಆದರೆ ಈ ಚಿತ್ರದ ಕಥೆ ಮತ್ತು ಪಾತ್ರ ಮಾಮೂಲಿ ಸಿನಿಮಾಗಳಿಗಿಂತ ಬೇರೆ ಥರದಲ್ಲಿ ಇರುವುದರಿಂದ, ಅಭಿನಯಿಸಲು ಒಪ್ಪಿಕೊಂಡೆ. ಇಡೀ ಸಿನಿಮಾ ಕ್ರೈಂ, ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ನಡೆಯುತ್ತದೆ. ನಾನು ಗಮನಿಸಿದಂತೆ ಕನ್ನಡದಲ್ಲಿ ಈ ಥರದ ಕಥೆಗಳು ಬಂದಿರುವುದು ತುಂಬ ವಿರಳ.
ಇನ್ನು ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ವಿಭಿನ್ನ ಶೇಡ್ಗಳಿವೆ. ಆದರೆ ಅದು ಏನು ಅನ್ನೋ ಗುಟ್ಟನ್ನು ಈಗಲೆ ಬಿಟ್ಟುಕೊಡಲಾರೆ. ಅದನ್ನು ಸ್ಕ್ರೀನ್ ಮೇಲೇ ನೋಡಬೇಕು’ ಎನ್ನುತ್ತಾರೆ. “ಇನ್ನು ಹೊಸಬರ ತಂಡದ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ’ ಎನ್ನುವ ಎಸ್. ಮಹೇಂದರ್, “ಈ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳ ಜೊತೆಗೆ ತುಂಬ ಎಮೋಷನ್ಸ್ ಇದೆ. ತುಂಬ ರಿಯಾಲಿಸ್ಟಿಕ್ ಆಗಿ ಬರುತ್ತಿದೆ. ನನಗೆ 35ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವವಿದ್ದರೂ, ಈ ಚಿತ್ರ ಮತ್ತೊಂದು ಹೊಸಥರದ ಅನುಭವ ಕೊಡುತ್ತಿದೆ’ ಎನ್ನುತ್ತಾರೆ.