ಭರಾಟೆಯಲ್ಲಿ ಸಹೋದರರ ಸವಾಲ್
Team Udayavani, Jan 8, 2019, 9:33 AM IST
“ನೀವು ಮೂರೂ ಜನ ಸಹೋದರರು ಒಂದೇ ಚಿತ್ರದಲ್ಲಿ ಒಟ್ಟಾಗಿ ನಟಿಸೋದು ಯಾವಾಗ’ – ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ … ಯಾರೇ ಎದುರಾಗಲಿ, ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳುತ್ತಿದ್ದರು. ಅದಕ್ಕೆ ಪೂರಕವಾಗಿ, “ನಮಗೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಒಳ್ಳೆಯ ಸ್ಕ್ರಿಪ್ಟ್ಗಾಗಿ ಎದುರು ನೋಡುತ್ತಿದ್ದೇವೆ’ ಎನ್ನುತ್ತಾ ಮುಂದೆ ಸಾಗುತ್ತಿದ್ದ ಸಹೋದರರು.
ಈಗ ಆ ಸಹೋದರರು ಒಂದಾಗುವ ಕಾಲ ಕೂಡಿಬಂದಿದೆ. ಅದು “ಭರಾಟೆ’ ಚಿತ್ರದ ಮೂಲಕ. ಶ್ರೀಮುರಳಿ ನಾಯಕರಾಗಿರುವ “ಭರಾಟೆ’ ಚಿತ್ರದಲ್ಲಿ ಮೂರೂ ಜನ ಸಹೋದರರು ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಮೂವರಿಗೂ ಚಿತ್ರದಲ್ಲಿ ಖಡಕ್ ಪಾತ್ರವಿದ್ದು, ಅಭಿಮಾನಿಗಳು ಒಂದೇ
ಸಿನಿಮಾದಲ್ಲಿ ನೋಡಿ ಖುಷಿಪಡಲಿದ್ದಾರೆಂಬುದು ನಿರ್ದೇಶಕ ಚೇತನ್ ಕುಮಾರ್ ಮಾತು.
“ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಅವರು ನಟಿಸುತ್ತಿರುವುದು
ಪಕ್ಕಾ ಆಗಿದೆ. ಈಗಾಗಲೇ ಮೂವರು ಕೂಡಾ ಕಥೆ, ಪಾತ್ರ ಕೇಳಿ ಇಷ್ಟಪಟ್ಟಿದ್ದಾರೆ.
ಮೂವರ ಪಾತ್ರ ನೆಗೆಟಿವ್ ಶೇಡ್ನೊಂದಿಗೆ ಸಾಗುತ್ತದೆ’ ಎಂದು ವಿವರ ಕೊಡುತ್ತಾರೆ ಚೇತನ್. ಈಗಾಗಲೇ ರವಿಶಂಕರ್ ಹಾಗೂ ಅಯ್ಯಪ್ಪ ಅವರ ಭಾಗದ ಬಹುತೇಕ ಚಿತ್ರೀಕರಣ ನಡೆದಿದ್ದು, ಶೀಘ್ರದಲ್ಲೇ ಸಾಯಿಕುಮಾರ್ “ಭರಾಟೆ’ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಎಲ್ಲಾ ಓಕೆ, ಮೂವರನ್ನು ಒಂದೇ ದೃಶ್ಯದಲ್ಲಿ ಒಟ್ಟಿಗೆ ನೋಡಬಹುದು ಎಂದು ನೀವು ಕೇಳಿದರೆ, ಖಂಡಿತಾ ಎಂಬ ಉತ್ತರ ಚೇತನ್ ಅವರಿಂದ ಬರುತ್ತದೆ. “ಮೂವರಿಗೂ ಸಾಕಷ್ಟು ದೃಶ್ಯಗಳಿದ್ದು, ಒಂದಷ್ಟು ದೃಶ್ಯಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ’ ಎಂದಷ್ಟೇ ಹೇಳುತ್ತಾರೆ ಚೇತನ್ ಕುಮಾರ್. ಚಿತ್ರವನ್ನು ಸುಪ್ರಿತ್ ನಿರ್ಮಿಸುತ್ತಿದ್ದು, ಶ್ರೀಲೀಲಾ ಈ ಚಿತ್ರದ ನಾಯಕಿ. ಈಗಾಗಲೇ ಶೇ 50 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಉಳಿದ ಭಾಗದ ಚಿತ್ರೀಕರಣದಲ್ಲಿ ತೊಡಗಿದೆ.